ಬೆಂಗಳೂರು: ರಾಜ್ಯದಲ್ಲಿ ಉತ್ತರ ಪ್ರದೇಶ ಸರ್ಕಾರದಂತೆ ಬುಲ್ಡೋಜರ್ ಸಂಸ್ಕೃತಿಗೆ ಅವಕಾಶ ನೀಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಚಿಕ್ಕಮಗಳೂರಿನಲ್ಲಿ ಈಗಾಗಲೇ ಬುಲ್ಡೋಜರ್ ಮೂಲಕ ಮನೆಗಳ ನೆಲಸಮ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಜನರನ್ನು ಹೆದರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗುತ್ತಿದೆ. ದಬ್ಬಾಳಿಕೆ ಮೂಲಕ ಅಲ್ಪಸಂಖ್ಯಾತರನ್ನು ಹೆದರಿಸುವುದು ಇಲ್ಲಿ ನಡೆಯಲ್ಲ ಎಂದರು.
ಇಂತಹ ಕ್ರಮಕ್ಕೆ ಸರ್ಕಾರ ಮುಂದಾದರೆ ನಾವೇ ಹೋಗಿ ಬುಲ್ಡೋಜರ್ ಮುಂದೆ ಮಲಗಿ ಪ್ರತಿಭಟಿಸುತ್ತೇವೆ. ಉತ್ತರ ಪ್ರದೇಶದ ಸರ್ಕಾರದ ರೀತಿ ಕರ್ನಾಟಕದಲ್ಲಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.