ಬೆಂಗಳೂರು, ಆ. 1: ಪಾಲಿಕೆ ಚುನಾವಣೆ ಯಾವುದೇ ಸಂಧರ್ಭದಲ್ಲಿ ಘೋಷಣೆ ಆಗಬಹುದು, ಇದಕ್ಕೆ ಪೂರ್ವ ತಯಾರಿಯನ್ನು ಪ್ರಾರಂಭಿಸಿರುವ ಆಮ್ ಆದ್ಮಿ ಪಕ್ಷ ಬಿಬಿಎಂಪಿ ಚುನಾವಣೆಗೆ ಭಾಸ್ಕರರಾವ್ ಅವರ ನೇತೃತ್ವದಲ್ಲಿ ಪ್ರಚಾರ ಸಮಿತಿಯನ್ನು ಘೋಷಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.
ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. “ಈ ಸಮಿತಿಯು ಪಕ್ಷವನ್ನು ಗೆಲ್ಲಿಸಿ ಬೆಂಗಳೂರಿನಲ್ಲಿ ಒಂದು ಜನಪರ ಮತ್ತು ಪ್ರಾಮಾಣಿಕ ಪಾಲಿಕೆಯನ್ನು ಸ್ಥಾಪಿಸುತ್ತದೆ ಎಂದು ಪಕ್ಷಕ್ಕೆ ಸಂಪೂರ್ಣ ನಂಬಿಕೆಯಿದೆ” ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಎಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಬಿಎಂಪಿ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ್ ರಾವ್ “ಜನರು ಪಾವತಿಸುವ ತೆರಿಗೆ ದುಡ್ಡು ಜನರ ಉದ್ಧಾರಕ್ಕೆ ಬಳಸಬೇಕೇ ಹೊರತು ರಾಜಕಾರಣಿಗಳ ಏಳೆಗೆ ಅಲ್ಲ ಎಂಬುದನ್ನು ನಾವು ನಂಬಿದ್ದೇವೆ. ಸುಸಜ್ಜಿತ ಶಾಲೆಗಳು, ಆಸ್ಪತ್ರೆಗಳು, ಉತ್ತಮ ರಸ್ತೆ, ನೀರು, ವಿದ್ಯುತ್ ಮತ್ತು ಬೆಳವಣಿಗೆಗೆ ಪೂರಕವಾದ ಅವಕಾಶಗಳು – ಜನಜೀವನಕ್ಕೆ ಬೇಕಾದ್ದು ಇಷ್ಟೇ, ಇದು ಜನರ ಹಕ್ಕೂ ಕೂಡಾ. ಆಪ್ ದೇಶಕ್ಕೆ ಒಂದು ಮಾದರಿಯನ್ನು ತೋರಿಸಿದೆ, ಮತ್ತು ಅದನ್ನು ಮಾಡಿ ತೋರಿಸಿದೆ, ಬೇರೆ ಪಕ್ಷಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿವೆ. ಎಂದರು
“ಕಳೆದ ವಾರವಷ್ಟೇ ಅಭ್ಯರ್ಥಿ ಶೋಧನಾ ಸಮಿತಿ ಯನ್ನು ರಚಿಸಿ ಘೋಷಣೆ ಮಾಡಿದ್ದೆವು, ಮಿಸ್ ಕಾಲ್ ಮತ್ತು ಈಮೇಲ್ ಮೂಲಕ ಸಂಪರ್ಕ ಮಾಡುವ ವ್ಯವಸ್ಥೆ ಕಲ್ಪಿಸಿದ್ದವು, ಇದರ ಮೂಲಕ 600ಕ್ಕೂ ಹೆಚ್ಚು ಜನರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಎಎಪಿ ಟಿಕೆಟ್ ನಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ವಾರ್ಡ್ ಮೀಸಲಾತಿ ಪ್ರಕಟಣೆಗೂ ಮುನ್ನವೇ ಇಷ್ಟು ಆಸಕ್ತರು ಬಂದಿರುವುದು, ಮೀಸಲಾತಿ ಘೋಷಣೆಯ ನಂತರ ಇನ್ನಷ್ಟು ಆಸಕ್ತರು ಬರುವುದು ಖಚಿತವಾಗಿ ಕಾಣುತ್ತದೆ’ ಎಂದು ಹೇಳಿದರು.
ಜನಸಂಪರ್ಕ ಮತ್ತು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚುಂದ್ರು ಮಾತನಾಡಿ “ಜನರು ಒಂದೆಡೆ 40% ಕಮಿಷನ್ ಸರ್ಕಾರದಿಂದ ಬೇಸತ್ತಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶಗೊಂಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಪರ್ಯಾಯ ರಾಜಕಾರಣ ನೀಡುತ್ತದೆ ಎಂಬ ನಂಬಿಕೆ ಜನರಲ್ಲಿ ಉಳಿದಿಲ್ಲ. ಜನರೇ ಹೇಳುವಂತೆ ಈ ಭ್ರಷ್ಟ ಬಿಜೆಪಿ ಯನ್ನು ಪ್ರಶ್ನಿಸಿ ಬಯಲಿಗೆಳೆಯುವ ನೈತಿಕ ಶಕ್ತಿ ಎಎಪಿಗೆ ಮಾತ್ರ ಇದೆ” ಎಂದರು.
“ಇತ್ತೀಚೆಗೆ ಸಚಿವ ಸಿ.ಎನ್.ಅಶ್ವಥನಾರಾಯಣ ರ ಟೆಂಡರ್ ಹಗರಣದ ಬಗ್ಗೆ ಸಾಕ್ಷಿ ಸಮೇತ ಎಎಪಿ ಮಾತನಾಡಿದ್ದು, ಆದರೂ ಯಾವುದೇ ತನಿಖೆ ಆರಂಭವಾಗದ ಕಾರಣ, ಇಷ್ಟರಲ್ಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು’ ಎಂದು ರಾಜ್ಯ ವಕ್ತಾರ ಕೆ.ಮಥಾಯಿ ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮತ್ತು ಪ್ರಚಾರ ಸಮಿತಿ ಸದಸ್ಯರಾದ ಲಕ್ಷ್ಮಿಕಾಂತ್ ರಾವ್, ಸುರೇಶ್ ರಾಥೋಡ್ ಇದ್ದರು.