ಬೆಂಗಳೂರು, ಜ.15: ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ನೀಡಲು ದರೋಡೆ ಕೃತ್ಯಗಳನ್ನು ಎಸಗಿದ್ದ ನಾಲ್ವರು ಶಂಕಿತ ಭಯೋತ್ಪಾದಕರಿಗೆ ಇಲ್ಲಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 40,000 ರೂಪಾಯಿ ದಂಡ ವಿಧಿಸಿದೆ.
ಎಲ್ಲಾ ಆರೋಪಿಗಳು ಪಶ್ಚಿಮ ಬಂಗಾಳದವರಾಗಿದ್ದು, ಬಾಂಗ್ಲಾದೇಶದ ಜಮಾತ್-ಉಲ್-ಮುಜಾಹಿದ್ದೀನ್ (ಜೆಎಂಬಿ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ನ್ಯಾಯಾಲಯ ಶನಿವಾರ ಆದೇಶ ಪ್ರಕಟಿಸಿತ್ತು.
ಕಡೋರ್ ಖಾಜಿ ಅಕಾ ಮೋಟಾ ಅನಾಸ್ (33), ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆ, ಮುಸ್ತಫಿಜರ್ ರಹಮಾನ್ ಅಕಾ ತುಹಿನ್ (39), ಶಂಶೇರ್ ಗಂಜ್ ಜಿಲ್ಲೆಯ ಆದಿಲ್ ಶೇಕ್ (27), ಮುರ್ಷಿದಾಬಾದ್ ಜಿಲ್ಲೆಯ ಅಬ್ದುಲ್ ಕರೀಂ ಅಕಾ ಚೋಟಾ (21). ಆರೋಪಿಗಳು ಕೆ.ಆರ್.ಪುರ, ಕೊತ್ತನೂರು, ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು. ಅಪರಾಧಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದ್ದು, ಎನ್ಐಎ ಅಧಿಕಾರಿಗಳು ಭಾರಿ ಪ್ರಮಾಣದ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ರಾಸಾಯನಿಕ ವಸ್ತುಗಳು, ಬಾಂಬ್ಗಳನ್ನು ತಯಾರಿಸಲು ಕಂಟೇನರ್ಗಳು, ಸುಧಾರಿತ ಸ್ಫೋಟಕ ಸಾಧನಗಳು ಮತ್ತು ಡಿಜಿಟಲ್ ಕ್ಯಾಮೆರಾವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು 2020 ರಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಆರೋಪಿಗಳು ತಮ್ಮ ನಿವಾಸದಲ್ಲಿ ಬಾಂಬ್ ಗಳನ್ನು ತಯಾರಿಸುತ್ತಿದ್ದರು ಎಂದು ತನಿಖೆಯಿಂದ ಸಾಬೀತಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಅಬ್ದುಲ್ ಕರೀಮ್ ಅಲಿಯಾಸ್ ಚೋಟಾ 2013 ರ ಜುಲೈ 7 ರಂದು ಬಿಹಾರದಲ್ಲಿ ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರವಾದ ಮಹಾಬೋಧಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಪ್ರಸನ್ನ ಕುಮಾರ್ ಅವರು ಎನ್ ಐಎ ಪರ ವಾದ ಮಂಡಿಸಿದರು.