ಬೆಂಗಳೂರು: ರಾಜ್ಯದ ಎಲ್ಲ ಮನೆಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ “ಗೃಹಜ್ಯೋತಿ” ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಪ್ರಕ್ರಿಯೆ ಭಾನುವಾರ (ಜೂ.18) ರಂದು ಆರಂಭವಾಗಿದ್ದು, ಮೊದಲ ದಿನ 55,000 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಗೃಹಜ್ಯೋತಿ ನೋಂದಣಿ ಪ್ರಕ್ರಿಯೆಗೆ ಸರ್ಕಾರ (Karnataka Government) ಅವಕಾಶ ಕಲ್ಪಿಸಿದ ಬೆನ್ನಲ್ಲೇ ಗ್ರಾಹಕರು ನೋಂದಣಿಗೆ ಮುಗಿಬಿದ್ದ ಕಾರಣ ಕೆಲ ಕಾಲ ಸರ್ವರ್ ಸಮಸ್ಯೆ ಎದುರಾಗಿತ್ತು. ಆಗಿಂದಾಗ್ಗೆ ಸರ್ವರ್ ಸಮಸ್ಯೆಯನ್ನು ತಾಂತ್ರಿಕ ಸಿಬ್ಬಂದಿ ನಿಭಾಯಿಸಿದರು. ಅತಿ ಹೆಚ್ಚು ಅರ್ಜಿಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ಬಂದಿವೆ.
ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭವಾಗಿದ್ದು, ಭಾನುವಾರ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 55000 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.