ಬೆಂಗಳೂರು: ಶಿಕ್ಷಣದಲ್ಲಿ ಮೌಲ್ಯ, ನೀತಿಗಳನ್ನು ಅಳವಡಿಸಿಕೊಳ್ಳದಿದ್ದರೆ, ಅದು ಪರಿಪೂರ್ಣ ಶಿಕ್ಷಣವಾಗುವುದಿಲ್ಲ. ಇದನ್ನು ಬಿಜೆಪಿ ಪ್ರತಿಪಾದಿಸುವಾಗ ವಿರೋಧ ಬೇಡ. ಅಲ್ಲದೆ, ಇದನ್ನು ಶಿಕ್ಷಕರ ಹೊರತಾಗಿ ಯಾವುದೇ ತಂತ್ರಜ್ಞಾನ ಕಲಿಸುವುದಕ್ಕೆ ಸಾಧ್ಯವಿಲ್ಲವೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಆರ್.ವಿ. ಶಿಕ್ಷಣ ಸಂಸ್ಥೆ ಶುಕ್ರವಾರ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಣ ಸಂಸ್ಥೆಯ ಮೈಲಿಗಲ್ಲು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಪಠ್ಯಪುಸ್ತಕದ ಶಿಕ್ಷಣದಿಂದ ಕಲಿತು ಪದವಿ ಪಡೆದರೆ, ಅದು ಪರಿಪೂರ್ಣವಾಗಿರುವುದಿಲ್ಲ. ಇಂದು ಮೌಲ್ಯಯುತ ಶಿಕ್ಷಣದ ಅವಶ್ಯತಕೆ ಹೆಚ್ಚಾಗಿದೆ. ಇದನ್ನು ಯಾವುದೇ ಪಕ್ಷ ಅನುಷ್ಠಾನಕ್ಕೆ ತಂದರೂ ಸ್ವಾಗತಿಸಬೇಕು. ಚಾಟ್ ಜಿಪಿಟಿ ಶಿಕ್ಷಕರಿಗೆ ಪರ್ಯಾಯವಲ್ಲ. ಇದು ಶಿಕ್ಷಕರಿಗೆ ಸಹಾಯ ಮಾಡುತ್ತದೆ ಅಷ್ಟೇ. ಮೌಲ್ಯಯುತ ಶಿಕ್ಷಣವನ್ನು ತಂತ್ರಜ್ಞಾನ ಕಲಿಸಲು ಸಾಧ್ಯವಿಲ್ಲ. ಅದು ಶಿಕ್ಷಕರು ವಿದ್ಯಾರ್ಥಿಗಳ ಜತೆಗೆ ಇರುವ ಒಡನಾಟದಿಂದ ಮಾತ್ರ ಸಾಧ್ಯವಿದೆ ಎಂದರು.
ಇನ್ನೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಶಿಕ್ಷಣ ನೀಡುವುದು ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಗೆ ಕಷ್ಟ. ಇಂದು ನಮ್ಮ ಸಮಾಜದಲ್ಲಿ ಶಿಕ್ಷಣ ಎಂಬುದು ಒಂದು ಲಾಭ ರಹಿತವಾದ ಸೇವೆಯಾಗಿದೆ. ಆದರೆ, ಇಂದು ವಾಣಿಜ್ಯೀಕರಣವಾಗಿದೆ ಎಂಬ ಚರ್ಚೆಗಳಿವೆ ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆದರೆ, ಬೆಲೆ ಏರಿಕೆ, ವೇತನ ಪರಿಷ್ಕರಣೆಯಾಗಿರುವುದರಿಂದ ಸಿಬ್ಬಂದಿ ವೇತನ, ಮೂಲಸೌಕರ್ಯವನ್ನು ಕಲ್ಪಿಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಶಿಕ್ಷಣ ನೀಡುವುದು ಖಾಸಗಿ ಸಂಸ್ಥೆಗಳಿಗೆ ಸವಾಲಿನ ಪ್ರಶ್ನೆಯಾಗಿದೆ. ಆದರೆ, ಆರ್.ವಿ.ಶಿಕ್ಷಣ ಸಂಸ್ಥೆ ಇದನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಶಿಕ್ಷಕರ ತರಬೇತಿಯ ಸಂಸ್ಥೆ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಿದ ಆರ್.ವಿ. ಸಂಸ್ಥೆಗಯು ಇಂದು ಅಗಾದವಾಗಿ ಬೆಳೆದಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ ಎಂದರು.
ಒಂದು ಸಮಯದಲ್ಲಿ ಭಾರತದಲ್ಲಿ ಕೇವಲ ಒಂದೇ ಒಂದು ಮಹಿಳಾ ವಿಶ್ವವಿದ್ಯಾಲಯವಿತ್ತು. ಇಂದು ಕಾಲ ಬದಲಾಗಿದೆ ಬಹುತೇಕ ಹೆಣ್ಣು ಮಕ್ಕಳ ಕಾಲೇಜುಗಳು ಉದ್ಭವಿಸಿವೆ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗವುದು ತಪ್ಪಿದೆ. ಒಂದು ಶಿಕ್ಷಣ ಸಂಸ್ಥೆಯ ಗುಣಮಟ್ಟತೆಯ ಹಿಂದೆ ಅಲ್ಲಿನ ಸಿಬ್ಬಂದಿ, ಪರಿಣಿತ ಉಪನ್ಯಾಸಕರು, ಶಿಸ್ತು ಬದ್ಧ ಆಡಳಿತ ವ್ಯವಸ್ಥೆಯ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹೋಗುವಾಗ ನೆನಪಿನ ಬುತ್ತಿಯನ್ನು ತೆಗೆದುಕೊಂಡು ಹೋಗಬೇಕು. ಅದೇ ರೀತಿ ಸಮಾಜಕ್ಕೂ ಕೊಡುಗೆ ನೀಡಬೇಕೆಂದರು.
ಈ ಮೊದಲು ಯಾರೋ ಪಠ್ಯಕ್ರಮ ರೂಪಿಸುತ್ತಿದ್ದರು. ಅದನ್ನೇ ಶಿಕ್ಷಕರು ಬೋಧಿಸುತ್ತಿದ್ದರು. ಅದು ವಿದ್ಯಾರ್ಥಿಗಳಿಗೆ ಇಷ್ಟವಿಲ್ಲದಿದ್ದರೂ ಓದಬೇಕಾದ ಅನಿರ್ವಾಯತೆ ಇತ್ತು. ಇಂದು ಕಾಲ ಬದಲಾಗಿದೆ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಜಾರಿಗೆ ತಂದಿರುವುದರಿಂದ ವಿದ್ಯಾರ್ಥಿಗಳಿಗೆ ಆಯ್ಕೆಗಳು ಹೆಚ್ಚಾಗಿವೆ. ಇಷ್ಟ ಪಟ್ಟ ವಿಷಯದಲ್ಲಿ ವ್ಯಾಸಂಗ ಮಾಡಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಜಾÐನವಂತರಾಗಲು ಸಾಧ್ಯವಾಗಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ನಮ್ಮ ತನ ನಮಗೆ ಶಕ್ತಿ. ಪ್ರತಿಯೊಬ್ಬರಿಗೂ ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳುವುದುಕ್ಕೆ ಶಿಕ್ಷಣಕ್ಕಿಂತ ಬೇರೊಂದು ದಾರಿ ಇಲ್ಲ. ನಾವು ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆ ಆಧಾರದ ಮೇಲೆ ನಮ್ಮ ಭವಿಷ್ಯ ಅವಲಂಬಿತವಾಗಿದೆ. ಅದು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿರುತ್ತದೆ. ಆರ್.ವಿ. ಶಿಕ್ಷಣ ಸಂಸ್ಥೆಗಳು ಹಲವಾರು ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣ ನೀಡುತ್ತಿರುವುದು ಶಾಘ್ಲನೀಯ ವಿಚಾರವಾಗಿದೆ. ಇದು ಜ್ಞಾನದ ಕಾಲ. ಜ್ಞಾನ ಇದ್ದರೇ ದೇಶವನ್ನೇ ಆಳಬಹುದು ಎಂದರು.
ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರು ಆರ್.ವಿ.ಕಾಲೇಜು ಆವರಣದಲ್ಲಿ ನಿರ್ಮಾಣಮಾಡಿರುವ ಜಿಮ್ ಅನ್ನು ಉದ್ಘಾಟಿಸಿದರು. ಆರ್.ವಿ.ಶಿಕ್ಷಣ ಸಂಸ್ಥೆಯ ಎ.ವಿ.ಎಸ್.ಮೂರ್ತಿ, ಡಿ.ಪಿ.ನಾಗರಾಜ್, ಎನ್ಎಂಕೆಆರ್ವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸ್ನೇಹಲತಾ ಜಿ.ನಾಡಿಗೇರ್ ಇತರರು ಇದ್ದರು.
ಒದೊಂದು ಅದ್ಭುತವಾದ ಜರ್ನಿಯಾಗಿದೆ. ಇಲ್ಲಿಂದ ಶಿಕ್ಷಣ ಪಡೆದ ಸಾಕಷ್ಟು ವಿದ್ಯಾರ್ಥಿಗಳು ವಿವಿಧ ದೇಶಗಳಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆರ್.ವಿ.ಶಿಕ್ಷಣ ಸಂಸ್ಥೆ ಮೊದಲಿಗೆ ಬಿ.ಇಡಿ ಕಾಲೇಜು ಆರಂಭಿಸಿದ್ದು, ಇಂದು ಉನ್ನತ ಶಿಕ್ಷಣದಲ್ಲೂ ಕ್ರಾಂತಿ ಮೂಡಿಸುತ್ತಿದೆ.
– ಡಾ.ಎಂ.ಪಿ.ಶ್ಯಾಮ್, ಅಧ್ಯಕ್ಷರು, ಆರ್.ವಿ.ಶಿಕ್ಷಣ ಸಂಸ್ಥೆ