ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ‘ಶಕ್ತಿ ಯೋಜನೆ’ ಆರಂಭಿಸಿದ್ದು, ಉಚಿತ ಬಸ್ ಪ್ರಯಾಣಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಹೇಳಿಕೆಯ ಪ್ರಕಾರ ಜೂನ್ 12 ರ ಮಧ್ಯರಾತ್ರಿಯಿಂದ ಮಧ್ಯಾಹ್ನ 12 ರವರೆಗೆ 41.34 ಲಕ್ಷ ಮಹಿಳಾ ಪ್ರಯಾಣಿಕರು ರಾಜ್ಯಾದ್ಯಂತ ಸರ್ಕಾರಿ ಸ್ವಾಮ್ಯದ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಸರ್ಕಾರ 8.83 ಕೋಟಿ ರೂ. ವೆಚ್ಚ ಮಾಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳಲ್ಲಿ ರಾಜ್ಯದ ರಾಜಧಾನಿ ಮತ್ತು ಸುತ್ತಮುತ್ತ 17.57 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರೆ, ಕೆಎಸ್ಆರ್ಟಿಸಿಯಲ್ಲಿ 11.40 ಲಕ್ಷ ಮಹಿಳೆಯರು, ಎನ್ಡಬ್ಲ್ಯೂಕೆಆರ್ಟಿಸಿಯಲ್ಲಿ 8.30 ಲಕ್ಷ ಮಹಿಳೆಯರು ಮತ್ತು ಕೆಕೆಆರ್ಟಿಸಿಯಲ್ಲಿ 4.40 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಮಧ್ಯರಾತ್ರಿಯ ನಂತರ ಡಿಪೋಗೆ ಹಿಂತಿರುಗುವ ಬಸ್ ವೇಳಾಪಟ್ಟಿಗಳ ಡೇಟಾವನ್ನು ಮೇಲಿನ ಅಂಕಿಅಂಶದಲ್ಲಿ ಸೇರಿಸಿಲ್ಲ. ಆ ಅಂಕಿಅಂಶಗಳನ್ನು ಸೇರಿಸಿದರೆ ಪ್ರಯಾಣಿಸಿದವರ ಅಂಕಿ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.
ಮುನ್ನೆಚ್ಚರಿಕೆಗೆ ಕ್ರಮ: ಶಕ್ತಿ ಯೋಜನೆ ಆರಂಭವಾದ ಮೊದಲ ದಿನ ಹಾವೇರಿ ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ್ದ ಬಸ್ನ ಫುಟ್ಬೋರ್ಡ್ನಲ್ಲಿ ಪ್ರಯಾಣಿಸುತ್ತಿದ್ದ ಶಾಲಾ ವಿದ್ಯಾರ್ಥಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ವಿವಿಧ ನಿಗಮಗಳು ನೀಡಿದೆ. ಪ್ರಯಾಣಿಕರು ಪ್ರಯಾಣಿಸುವಾಗ ಬಸ್ನ ಬಾಗಿಲುಗಳನ್ನು ಮುಚ್ಚುವಂತೆ ಚಾಲಕ, ನಿರ್ವಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.