ಬೆಂಗಳೂರು: ಸರ್ಕಾರಿ ಶಾಲೆಯ ಶೌಚಾಲಯಗಳನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದ ವಿಚಾರವಾಗಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳು ಕಸ ಗುಡಿಸುವುದರಲ್ಲಿ, ಅಗತ್ಯ ಸಾಧನಗಳನ್ನು ಬಳಸಿಕೊಂಡು ಶೌಚಾಲಯ ಸ್ವಚ್ಛಗೊಳಿಸಿರುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಮೂಡುಬಿದಿರೆಯಲ್ಲಿ ಜ.5ರಂದು ಮಾತನಾಡಿದ ಅವರು, ವಿದ್ಯಾರ್ಥಿಗಳು ಕೆಲಸಗಳನ್ನು ಚಿಕ್ಕಂದಿನಲ್ಲೇ ತಿಳಿದುಕೊಳ್ಳುವುದು ಉತ್ತಮ. ಇದೂ ಸಹ ಶಿಕ್ಷಣದ ಒಂದು ಭಾಗ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ, ಕಸ ಗುಡಿಸುವುದಕ್ಕೆಂದೇ ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ. ವಿದ್ಯಾರ್ಥಿಗಳು ಆ ಕೆಲಸ ಮಾಡುವುದು ಸಹಜ. ಕೈಗವಸು ಹಾಕಿ ಬ್ರಷ್ ಬಳಸಿ ಶೌಚಾಲಯ ಸ್ವಚ್ಛಗೊಳಿಸಿವುದು ತಪ್ಪಲ್ಲ. ಸಣ್ಣವನಿದ್ದಾಗ ನಾನೂ ಆ ಕೆಲಸ ಮಾಡಿದ್ದೆ ಎಂದಿದ್ದಾರೆ.