ಬೆಂಗಳೂರು: ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯಲು ಸಿದ್ಧತೆ ನಡೆಸಲಾಗಿದೆ. ನವೆಂಬರ್ 24 ರಿಂದ 26ರವರೆಗೆ ನಗರದ ಅರಮನೆ ಮೈದಾನದಲ್ಲಿ’ಬೆಂಗಳೂರು ಕಂಬಳ-ನಮ್ಮ ಕಂಬಳ’ ಕಾರ್ಯಕ್ರಮ ನಡೆಯಲಿದೆ. ಇನ್ನು ಕಂಬಳದ ಕೋಣಗಳಿಗೂ ಸೂಕ್ತ ಜಾಗ, ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ. ಕಂಬಳಕ್ಕೆ 77.50- 78 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆಯಿದ್ದು, ಸರ್ಕಾರ ಒಂದು ಕೋಟಿ ರೂ. ಅನುದಾನ ಪ್ರಕಟಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳು ಹಣ ಸಹಾಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ನವೆಂಬರ್ 25ರ ಸಂಜೆ 3:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕಂಬಳ ಉದ್ಘಾಟನೆ ಮಾಡಲಿದ್ದಾರೆ.
ನವೆಂಬರ್ 25 ಮತ್ತು 26ರಂದು ಕಂಬಳ ವೀಕ್ಷಿಸಲು ಲಕ್ಷಾಂತರ ಜನ ಅರಮನೆ ಮೈದಾನದಲ್ಲಿ ಸೇರುವ ನಿರೀಕ್ಷೆ ಇದ್ದು ಬೆಂಗಳೂರು ಸಂಚಾರ ಪೊಲೀಸರು, ಸುಗಮ ಸಂಚಾರ ಏರ್ಪಡಿಸಲು ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ, ವಾಹನ ನಿಲುಗಡೆ ಸ್ಥಳ ಮತ್ತು ಬದಲೀ ಮಾರ್ಗಗಳ ಬಗ್ಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಇನ್ನು ಆಹಾರ ಮತ್ತಿತರ ಮಳಿಗೆಗಳ 150 ಕೌಂಟರ್ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇಲ್ಲಿ ಹಣ ಕೊಟ್ಟು ಊಟ, ತಿಂಡಿಗಳನ್ನು ಸವಿಯಬಹುದು. 2 ಸಾವಿರ ಮಂದಿ ಕೂತು ವೀಕ್ಷಣೆ ಮಾಡುವಂತಹ ಗ್ಯಾಲರಿಯಿದೆ. 25 ರಿಂದ 30 ಸಾವಿರ ಜನರು ಏಕಕಾಲದಲ್ಲಿ ನಿಂತು ನೋಡುವ ವ್ಯವಸ್ಥೆಯಿದೆ. ಅಲ್ಲದೆ 400 ಮಂದಿ ಕಾರ್ಯಕರ್ತರನ್ನು ಸಂಚಾರ ನಿರ್ವಹಣೆಗಾಗಿ ನಿಯೋಜಿಸಲಾಗಿದೆ. ಸುಮಾರು 300 ಮಂದಿ ಬೌನ್ಸರ್ಗಳಿರುತ್ತಾರೆ. ಪೊಲೀಸ್ ಸಿಬ್ಬಂದಿಯೂ ಇರಲಿದ್ದಾರೆ. ಹೀಗಾಗಿ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅಶೋಕ್ಕುಮಾರ್ ರೈ ತಿಳಿಸಿದರು.