ಬೆಂಗಳೂರು: ಕರಾವಳಿಯ ಹೆಮ್ಮೆಯ ಜನಪದ ಕ್ರೀಡೆ ಕಂಬಳವನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆ ನಡೆದಿದೆ. ಈ ವರ್ಷ ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಂಬಳ ಮಾಡಲು ಸಿದ್ಧತೆ ಭರದಿಂದ ನಡೆಯುತ್ತಿದೆ.
ಕರಾವಳಿ ಭಾಗದ ಸಾಂಪ್ರದಾಯಿಕ ಆಟ ಕಂಬಳ ಈ ವರ್ಷ ಮೊಟ್ಟ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿದೆ ಅನ್ನೋದು ವಿಶೇಷ..!ಬೆಂಗಳೂರಿನಲ್ಲಿ ನವೆಂಬರ್ 24, 25, 26ಕ್ಕೆ ಒಟ್ಟು ಮೂರು ದಿನಗಳ ಕಾಲ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಇದೀಗ ಅದ್ದೂರಿ ಬೆಂಗಳೂರಿನ ಕಂಬಳಕ್ಕೆ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಬರಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಮೊಟ್ಟ ಮೊದಲು ಬಾರಿಗೆ ರಾಜಧಾನಿಯಲ್ಲಿ ಕಂಬಳವನ್ನ ಮಾಡಲು ತುಳುಕೂಟ ನಿರ್ಧರಿಸಿದೆ. ಸದ್ಯ ಈ ಕಂಬಳವನ್ನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮಾಡಲು ಜಾಗ ಗುರುತಿಸಿದ್ದು, ಈಗಾಗಲೇ ಮೈಸೂರ್ ಒಡೆಯರ್ ಜೊತೆಗೂ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇನ್ನು ನವೆಂಬರ್ ತಿಂಗಳ 24, 25, 26 ನೇ ತಾರೀಖಿನಂದು ಕಂಬಳ ನಡೆಸಲು ದಿನಾಂಕ ನಿಗದಿ ಮಾಡಿದ್ದು, ಕಂಬಳಕ್ಕೆ 150 ಜೋಡಿಯ ಕೋಣಗಳು ಬರಲಿವೆಯಂತೆ. ಇನ್ನು ಈ ಮೂರು ದಿನಗಳ ಕಾಲ ಈ ಕಂಬಳ ನಡೆಯಲಿದ್ದು, ಅಂದಾಜು 5 ಲಕ್ಷಕ್ಕು ಅಧಿಕ ಜನರು ಬರುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕೆ ತುಳುನಾಡಿನ ಬೆಡಗಿ ಅನುಷ್ಕಾ ಶೆಟ್ಟಿ ಆಗಮಿಸುವ ಎಲ್ಲಾ ನಿರೀಕ್ಷೆಗಳು ಇವೆ.
ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಅನುಷ್ಕಾ ಶೆಟ್ಟಿ, ಸೇರಿದಂತೆ ಹಲವರು ಬರುವ ಸಾಧ್ಯತೆ ಇದ್ದು, ಕಂಬಳಕ್ಕೆ ಬರುವ ಕೋಣಗಳನ್ನ ವಾಹನಗಳಲ್ಲಿ ತರಿಸುವ ವ್ಯವಸ್ಥೆ ಬಗ್ಗೆ ಚರ್ಚೆಗಳು ನಡಿತಿವೆ. ಸಕಲೇಶಪುರ, ಹಾಸನ, ನೆಲಮಂಗಲ ಮೂರು ಕಡೆ ಕೋಣಗಳಿಗೆ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿವೆ.