ಬೆಂಗಳೂರು: ಸಂಘಟನೆಯ ಈಶಾನ್ಯ ಝೋನಲ್ ಕಾರ್ಯದರ್ಶಿ ಮುಹಮ್ಮದ್ ರೋಸ್ಲನ್ ಅವರ ತಮಿಳುನಾಡಿನಲ್ಲಿರುವ ಮನೆಗೆ ಎನ್.ಐ.ಎ ಇಂದು ದಾಳಿ ನಡೆಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ತೀವ್ರವಾಗಿ ಖಂಡಿಸಿದ್ದಾರೆ.
ಈ ದಾಳಿಯು ಸಂಘಟನೆಯ ನಾಯಕರು ಮತ್ತು ಸದಸ್ಯರ ವಿರುದ್ಧ ಬಿಹಾರದಲ್ಲಿ ಜುಲೈನಲ್ಲಿ ಎನ್.ಐ.ಎಯಿಂದ ಪ್ರಾರಂಭಿಸಲಾದ ಕಿರುಕುಳದ ಮುಂದುವರಿದ ಭಾಗವಾಗಿದೆ. ಬಿಹಾರ ಪೊಲೀಸರು ವಿಚಾರಣೆ ನೆಪದಲ್ಲಿ ಪಾಟ್ನಾದ ಫುಲ್ವಾರಿ ಪ್ರದೇಶದಿಂದ ಅಮಾಯಕರನ್ನು ವಶಕ್ಕೆ ಪಡೆದರು.
ನಂತರ ಅವರನ್ನು ಮಾಧ್ಯಮದ ಮುಂದೆ ಭಯೋತ್ಪಾದಕರಂತೆ ಪ್ರಸ್ತುತಪಡಿಸಲಾಯಿತು. ಬಿಹಾರ ಪೊಲೀಸರು ಸ್ವತಃ ವಿರೋಧಾಭಾಸದ ಹೇಳಿಕೆಗಳನ್ನು ಹೊರಡಿಸಿದ್ದು, ಈ ಪ್ರಕರಣವು ರಾಜಕೀಯ ಪ್ರೇರಿತ ಮತ್ತು ಪಾಪ್ಯುಲರ್ ಫ್ರಂಟ್ ಅನ್ನು ಗುರಿಪಡಿಸುವ ಪಿತೂರಿಯ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ನಂತರ ಬಿಹಾರ ಮತ್ತು ಇತರ ರಾಜ್ಯಗಳಿಂದ ಸಂಘಟನೆಯ ಸದಸ್ಯರು ಮತ್ತು ನಾಯಕರು ಸಹಿತ 20 ಮಂದಿಯ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಎನ್.ಐ.ಎ ತುರ್ತಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸಂಗತಿಯನ್ನು ಗಮನಿಸಿದರೆ, ಈ ಪ್ರಕರಣವು ಪಾಪ್ಯುಲರ್ ಫ್ರಂಟ್ ಅನ್ನು ಸೈತಾನೀಕರಿಸುವ ಮತ್ತೊಂದು ತಂತ್ರಗಾರಿಕೆಯಾಗಿದೆ ಎಂಬ ಅನುಮಾನವನ್ನು ಪುಷ್ಟೀಕರಿಸುತ್ತದೆ. ಈ ಏಜೆನ್ಸಿಯು ಹಿಂದುಳಿದ ವರ್ಗಗಳ ನಡುವೆ ವಿಶ್ವಾಸವನ್ನು ಉಳಿಸಿಕೊಂಡಿಲ್ಲ. ಇದೀಗ ಎನ್.ಐ.ಎ ಪಾಪ್ಯುಲರ್ ಫ್ರಂಟ್ ಝೋನಲ್ ಕಾರ್ಯದರ್ಶಿಯವರ ಮನೆಗೆ ದಾಳಿ ನಡೆಸಿದೆ. ಮುಹಮ್ಮದ್ ರೋಸ್ಲನ್ ಸಂಘಟನೆಯ ಕಾರ್ಯ ಚಟುವಟಿಕೆಗಳ ಅಂಗವಾಗಿ ಬಿಹಾರಕ್ಕೆ ಭೇಟಿ ನೀಡಿದ್ದರೇ ವಿನಃ ಇತರ ಯಾವುದೇ ತಪ್ಪು ಕೆಲಸಗಳನ್ನು ಮಾಡಿಲ್ಲ. ಓರ್ವ ನಾಗರಿಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಭೇಟಿ ನೀಡುವುದು ಅಪರಾಧವೇನೂ ಅಲ್ಲ ಎಂದು ಅವರು ಹೇಳಿದ್ದಾರೆ.
ಎನ್.ಐ.ಎ ರಾಜಕೀಯ ಪ್ರಭುಗಳ ದಾಳಗಳಾಗಿ ಕಾರ್ಯಾಚರಿಸುವುದನ್ನು ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಕರೆ ನೀಡುತ್ತದೆ. ಇಂತಹ ಕಿರುಕುಳ ಮತ್ತು ಹೆಸರು ಕೆಡಿಸುವ ಕೃತ್ಯಳಿಂದ ಪಾಪ್ಯುಲರ್ ಫ್ರಂಟ್ ಅನ್ನು ತಡೆಯಲಾಗದು. ಈ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಬೀದಿಯಲ್ಲಿ ಮತ್ತು ನ್ಯಾಯಾಲಯದಲ್ಲಿ ಎದುರಿಸುವ ಶಕ್ತಿಯನ್ನು ಸಂಘಟನೆ ಹೊಂದಿದೆ ಎಂದು ಅನೀಸ್ ಅಹ್ಮದ್ ಹೇಳಿದ್ದಾರೆ.