ಬೆಂಗಳೂರು: ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಮಂಕಿಪಾಕ್ಸ್ ಸೋಂಕು ಹರಡುವಿಕೆ ತಡೆಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಎಲ್ಲಾ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು, ಹೆಚ್ಚಿನ ಕಣ್ಗಾವಲು, ಸಾಂಸ್ಥಿಕ ಐಸೋಲೇಶನ್ ಗಾಗಿ ಸೂಕ್ತ ಸ್ಥಳ ಗೊತ್ತುಪಡಿಸುವಿಕೆ, ಕಡ್ಡಾಯ ಸಂಪರ್ಕ ಪತ್ತೆ ಮತ್ತು ಸ್ಯಾಂಪಲ್ ಗಳ ಪರೀಕ್ಷೆ ಕುರಿತಂತೆ ಹೊರಡಿಸಲಾಗಿರುವ ಸುತ್ತೋಲೆಯನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮಂಕಿಪಾಕ್ಸ್ ನ ಪ್ರತಿಯೊಂದು ಪ್ರಕರಣವನ್ನು ವರದಿ ಮಾಡುವುದು, ವಿವರವಾದ ತನಿಖೆ, ಮಾದರಿ ಸಂಗ್ರಹ ಮತ್ತು ಐಹೆಚ್ ಐಪಿ ಪೋರ್ಟಲ್ ನಲ್ಲಿ ವರದಿ ಮಾಡಿದ ನಂತರ ರಾಜ್ಯಕ್ಕೆ ವರದಿ ಮಾಡತಕ್ಕದ್ದು, ಶಂಕಿತ ಹಾಗೂ ಖಚಿತ ಪ್ರಕರಣಗಳಿಗಾಗಿ ನಿರ್ದಿಷ್ಠ ಸಾಂಸ್ಥಿಕ ಪ್ರತ್ಯೇಕತೆ ಸೌಲಭ್ಯ ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕಡ್ಡಾಯವಾಗಿ ಎಲ್ಲಾ ಶಂಕಿತ ಪ್ರಕರಣಗಳ ಸಂಪರ್ಕಿತರನ್ನು ಪತ್ತೆ ಮಾಡಿ, ಮಂಕಿಪಾಕ್ಸ್ ಲಕ್ಷಣ ಕಂಡುಬಂದರೆ, ಕೂಡಲೇ ಪರೀಕ್ಷೆಗೊಳಪಡಿಸುವುದು ಹಾಗೂ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗ ಶಾಲೆಗಳಿಗೆ ಕಳುಹಿಸಿಕೊಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.