ಬೆಂಗಳೂರು: ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿಯವರು ಮಾತ್ರ ತಮ್ಮ ಸ್ವಜಾತಿಯನ್ನು ಬಿಟ್ಟು ಹೊರಗಡೆ ಬರದೆ ಇರುವ ಒಬ್ಬ ಕೂಪಮಂಡೂಕ ನಾಯಕ. ಅವರು ಸ್ವಾರ್ಥತನ, ಕೂಪಮಂಡೂಕತನ, ಸ್ವಜಾತಿ ಪಕ್ಷಪಾತಕ್ಕೆ ಜ್ವಲಂತ ಉದಾಹರಣೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಟೀಕಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಲ್ಹಾದ್ ಜೋಶಿ, ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುವುದನ್ನು ಬಿಜೆಪಿ ಖಂಡಿಸುತ್ತದೆ. ಸಾವರ್ಕರ್, ಗೋಪಾಲಕೃಷ್ಣ ಗೋಖಲೆ, ರಾನಡೆ, ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರೆಲ್ಲರೂ ಬ್ರಾಹ್ಮಣರಾದರೂ ಸ್ವಂತ ಜಾತಿಯ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿಯವರು ನಿಸ್ವಾರ್ಥಿ, ಉದಾರಿ ರಾಜಕಾರಣಿ ಆಗಿದ್ದರೆ ನಿಮ್ಮ ಮನೆಯನ್ನು ಬಿಟ್ಟು ಹೊರಗಡೆ ಬಂದು ಯೋಚಿಸಬೇಕು. ಕುಮಾರಸ್ವಾಮಿ, ರೇವಣ್ಣ, ದೇವೇಗೌಡರ ಕುಟುಂಬವನ್ನು ಬಿಟ್ಟು ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಪ್ರಕಟಿಸಿ ಎಂದು ವಿನಂತಿ ಮಾಡುವುದಾಗಿ ಹೇಳಿದರು.
ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ವಿಧಾನಸೌಧದಿಂದ ಆಡಳಿತ ನಡೆಸುತ್ತಿರಲಿಲ್ಲ. ದೇವೇಗೌಡರ ಮನೆಯಿಂದ ಆಡಳಿತ ಮಾಡಿರಲಿಲ್ಲ. ನೀವು ಆಡಳಿತದಲ್ಲಿ ಇದ್ದಾಗ ತಾಜ್ ವೆಸ್ಟೆಂಡ್ನಿಂದ ಆಡಳಿತ ನಡೆಸಿದ್ದಲ್ಲವೇ? ಜನ ಮರೆತಿದ್ದಾರೆ ಎಂದು ನೀವು ಭಾವಿಸಿದ್ದೀರಲ್ಲವೇ ಎಂದು ಕೇಳಿದರು. ನೀವು ಅಷ್ಟೊಂದು ಸ್ವಾರ್ಥಿ ರಾಜಕಾರಣಿ ಎಂಬುದನ್ನು ಕರ್ನಾಟಕದ ಜನರು ಕಂಡಿದ್ದಾರೆ ಎಂದು ತಿಳಿಸಿದರು.
ಪ್ರಲ್ಹಾದ್ ಜೋಶಿಯವರ ಸಮಯೋಚಿತ ಹೇಳಿಕೆ
ಕುಮಾರಸ್ವಾಮಿಯವರ ಮನೆಯಲ್ಲಿ 9 ಜನ ರಾಜಕಾರಣಿಗಳಿದ್ದಾರೆ. ಆದ್ದರಿಂದ ಪಂಚರತ್ನ ಹೆಸರು ಸರಿ ಹೊಂದುವುದಿಲ್ಲ. ಪ್ರಲ್ಹಾದ್ ಜೋಶಿಯವರು ಸರಿಯಾಗಿ ಹೇಳಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್, ಅನಿತಾ ಕುಮಾರಸ್ವಾಮಿ, ಭವಾನಿ, ನಿಖಿಲ್, ಸೂರಜ್ ಸೇರಿ ನವರತ್ನ ರಾಜಕಾರಣಿಗಳಿದ್ದಾರೆ. ಹಾಗಾಗಿ ನವರತ್ನ ಯಾತ್ರೆ ಮಾಡಲು ಹೇಳಿದ್ದು ಸಮಯೋಚಿತವಾಗಿದೆ ಎಂದು ಎನ್.ರವಿಕುಮಾರ್ ಸಮರ್ಥಿಸಿದರು.
ಆರೆಸ್ಸೆಸ್ನವರು ಮಹಾತ್ಮ ಗಾಂಧೀಜಿ ಅವರ ಹತ್ಯೆ ಮಾಡಿದರು ಎಂದು ಹೇಳಿದ್ದೀರಿ. ಆಗ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿತ್ತು. ಕಾಂಗ್ರೆಸ್ ಪಕ್ಷ ತನಿಖೆಗೆ ಜಸ್ಟಿಸ್ ಕಪೂರ್ ಆಯೋಗವನ್ನು ನೇಮಿಸಿತ್ತು. ಅಕಸ್ಮಾತ್ ಓದುವ ಅಭ್ಯಾಸ ಇದ್ದರೆ ಆ ಆಯೋಗದ ವರದಿಯನ್ನು ದಯವಿಟ್ಟು ಓದಿ ಎಂದು ಆಗ್ರಹಿಸಿದರು. ಗಾಂಧೀಜಿ ಅವರ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಇಲ್ಲ ಎಂದು ಸುಪ್ರೀಂ ಕೋರ್ಟಿನ ತೀರ್ಪಿದೆ ಎಂದು ನೆನಪಿಸಿದರು.
ಕುಮಾರಸ್ವಾಮಿ ಅತ್ಯಂತ ಸ್ವಾರ್ಥಿ ರಾಜಕಾರಣಿ. ಕರ್ನಾಟಕ ಅಸೆಂಬ್ಲಿಯಲ್ಲಿ ಬಿಜೆಪಿಗಾಗಲೀ, ಕಾಂಗ್ರೆಸ್ ಪಕ್ಷಕ್ಕಾಗಲೀ ಬಹುಮತ ಬರಬಾರದು; ಅತಂತ್ರ ಪರಿಸ್ಥಿತಿ ಬರಬೇಕು. ನಾನು ನಿರ್ಧಾರ ಮಾಡುವವನಾಗಬೇಕು; ನನ್ನ ಮನೆ ಬಾಗಿಲಿಗೆ ಬರಬೇಕು. ಎಂಬ ಅತ್ಯದ್ಭುತ ಆಸೆಯನ್ನು ಇಟ್ಟುಕೊಂಡವರು ಕುಮಾರಸ್ವಾಮಿ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಕುಮಾರಸ್ವಾಮಿ ಈ ಥರ ಮಾತನಾಡುತ್ತಿದ್ದಾರೆ ಮತ್ತು ಚಡಪಡಾಯಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬಿಜೆಪಿ ಯಾವತ್ತೂ ಕುಮಾರಸ್ವಾಮಿ ಬಗ್ಗೆ ಮೃದು ಧೋರಣೆ ಹೊಂದಿರಲಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅತಂತ್ರ ಇಲ್ಲ; ಅತ್ಯಂತ ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿ ಎಲ್ಲ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಉತ್ತರ ಕೊಟ್ಟರು. ಕುಮಾರಸ್ವಾಮಿಯವರು ಹರಿಶ್ಚಂದ್ರರಲ್ಲ. ನಾವೂ ಅವರ ಬಗ್ಗೆ ಮಾತನಾಡುತ್ತೇವೆ ಎಂದು ರವಿಕುಮಾರ್ ಅವರು ಎಚ್ಚರಿಸಿದರು.
ಸಿ.ಡಿ. ಯಾತ್ರೆ ಮಾಡಲಿ ಎಂಬ ಟೀಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನೋಡಿ.. ಕುಮಾರಸ್ವಾಮಿಯವರ ಬಗ್ಗೆ ಸಿ.ಡಿ., ತಾಜ್ ವೆಸ್ಟೆಂಡ್ ಹೋಟೆಲ್, ಅವರ ಮನೆ, ಅವರ ತೋಟದ ಮನೆ ಇವೆಲ್ಲ ಪ್ರಕರಣಗಳು ನನಗೂ ಗೊತ್ತಿವೆ. ಅವರು ಇದೇ ಥರ ಮಾತನಾಡುತ್ತಿದ್ದರೆ ನಾವು ಕೂಡ ರಾಜಕಾರಣ ಮಾಡಲು ಬಂದವರು ಎಂಬುದನ್ನು ತಿಳಿದುಕೊಳ್ಳಲಿ ಎಂದು ಸವಾಲೆಸೆದರು.