ಬೆಂಗಳೂರು: ರಾಜ್ಯದಲ್ಲಿ ನಡು ಮಳೆಗಾಲದಲ್ಲಿಯೇ ಬಿರು ಬೇಸಿಗೆಯ ವಾತಾವರಣವಿದೆ. ತುಂಬಿ ಹರಿಯಬೇಕಿದ್ದ ನದಿಗಳು ಬತ್ತಿ ಹೋಗಿವೆ. ರಾಜ್ಯದ ಜಲಮೂಲದ ಜಿಲ್ಲೆಗಳೆಂದೆ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿಯೇ ನದಿ, ಹಳ್ಳಕೊಳ್ಳಗಳಲ್ಲಿ ನೀರಿನ ಒರತೆ ತೀರಾ ಕಡಿಮೆಯಿದೆ.
ಈ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ವಿರೋಧ ಪಕ್ಷ ಹಾಗೂ ರೈತರಿಂದ ತೀವ್ರ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ, ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಮಟ್ಟವನ್ನು ಇಳಿಕೆ ಮಾಡಿದೆ. ಸರ್ವಪಕ್ಷ ಸಭೆ ಬಳಿಕ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ಇಳಿಕೆ ಮಾಡಿದೆ. ಈ ಬೆಳವಣಿಗೆ ರೈತರಲ್ಲಿ ತುಸು ಸಮಾಧಾನವನ್ನು ನೀಡಿದೆ.
ನೀರಾವರಿ ಇಲಾಖೆ ಅಧಿಕಾರಿಗಳು 6,000 ಕ್ಯೂಸೆಕ್ಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಿದ್ದರಿಂದ ಜಲಾಶಯದ ಮಟ್ಟ 2,281 ಅಡಿಯಿಂದ 2,276 ಅಡಿಗೆ ಇಳಿದಿದೆ. ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನೀರಾವರಿ ಕಾಲುವೆಗೆ ಬಿಡುಗಡೆ ಮಾಡಬೇಕಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆಂದು ತಿಳಿದುಬಂದಿದೆ.