ಜೆ.ಪಿ.ನಗರ: ಶಿಕ್ಷಣ ಕ್ಷೇತ್ರವು ಪ್ರಬಲವಾದಷ್ಟು ಪ್ರಗತಿಪರ ದೇಶವಾಗುತ್ತದೆ ಎಂದು ಮೈಸೂರಿನ ಮಾನಸಗಂಗೋತ್ರಿಯ ಡ್ಯಾನ್ಸ್ ಕಾಲೇಜ್ ಆಫ್ ಫೈನ್ ಆರ್ಟ್ಸ್ನ ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರಾದ ಡಾ.ಕುಮಾರ್ ಅಭಿಪ್ರಾಯಪಟ್ಟರು.
ಜೆ.ಪಿ.ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನಸಧಾರ ಹಬ್ಬದಲ್ಲಿ ನಡೆದ ಅಂತರ್ ಶಾಲಾ ಶಾಸ್ತ್ರೀಯ ಯುಗಳ ನೃತ್ಯ ಸ್ಪರ್ಧೆ ಯನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಹಲವು ಕಡೆಗಳಿಂದ ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಜೆಎಸ್ಎಸ್ ಶಿಕ್ಷಣ ಸಂಸ್ಥೆಯು ಉಳಿದ ಶಿಕ್ಷಣ ಸಂಸ್ಥೆಗಳಿಗಿಂತ ಮುಂಚೂಣಿಯಲ್ಲಿದ್ದು ಅಕ್ಷರದಾಸೋಹಕ್ಕೆ ಹೆಚ್ಚಿನ ಪ್ರಾದಾನ್ಯತೆ ನೀಡಿ ಪಾಶ್ಚಾತ್ಯ ದೇಶಗಳಲ್ಲಿ ದಾಪುಗಾಲನ್ನಿಡುತ್ತಾ ಅಕ್ಷರದ ಕಂಪನ್ನು ಪಸರಿಸುತ್ತಿರುವುದು ಖುಷಿಯ ಸಂಗತಿಯಾಗಿದೆ.
ವಿದ್ಯೆ ಕಲಿತ ಪಂಡಿತನಿಗೆ ಸರ್ವಕಡೆಯೂ ಮಾನ್ಯತೆಯಿದೆ. ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಆಧ್ಯಾತ್ಮಿಕತ ಚಿಂತನೆಗೆ ನೃತ್ಯವೂ ಪೂರಕವಾಗಿದ್ದು, ಕಳೆದ 8 ವರ್ಷಗಳಿಂದಲೂ ನೃತ್ಯಕಲೆಗೆ ಒತ್ತು ಕೊಟ್ಟು ನೃತ್ಯಸ್ಪರ್ಧೆಯನ್ನು ಏರ್ಪಡಿಸಿ ನಡೆಸಿಕೊಂಡು ಬರುತ್ತಿರುವುದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಡಗೊಳಿಸಲು ಉತ್ತೇಜನ ನೀಡುತ್ತದೆ ಎಂದರು.
ಜೆಎಸ್ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸ್ಮಿತಾ ಕುರುಪ್, ಉಪ ಪ್ರಾಂಶುಪಾಲರಾದ ಸುನೀತಾ ವಿದುಷಿ ಶ್ರೀಮತಿ ನೇತ್ರಾ ನಂದನ ಮತ್ತು ಪಿ ಕೆ ನಾಗಲಕ್ಷ್ಮಿ, ವಿದುಷಿ ಶ್ರೀಲಕ್ಷ್ಮಿಕುಮಾರ್ ಇದ್ದರು. ನೃತ್ಯ ಕಾರ್ಯಕ್ರಮದಲ್ಲಿ ಸುಮಾರು 17 ಶಾಲೆಗಳಿಂದ 34 ವಿದ್ಯಾರ್ಥಿಗಳು ಭಾಗವಹಿಸಿದ್ದರು.