ಬೆಂಗಳೂರು, ಜು.19: ಆನ್ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಮತ್ತು ಮನೋರಂಜನಾ ಕಂಪೆನಿಯಾದ ಗೇಮ್ಸ್ಕ್ರಾಫ್ಟ್ನ ಸಮಾಜಮುಖಿ ಘಟಕವಾದ ಗೇಮ್ಸ್ಕ್ರಾಫ್ಟ್ ಫೌಂಡೇಷನ್, ಅಂಜು ಬಾಬ್ಬಿ ಸ್ಪೋರ್ಟ್ಸ್ ಫೌಂಡೇಷನ್ (ಎಬಿಎಸ್ಎಫ್) ಜೊತೆಗೆ ಪಾಲುದಾರಿಕೆ ಪ್ರಕಟಿಸಿದೆ. ಇದರ ಪ್ರಕಾರ ಬೆಂಗಳೂರಿನಲ್ಲಿ ಎಬಿಎಸ್ಎಫ್ ಅಕಾಡೆಮಿಯ ಬೆಳವಣಿಗೆಗೆ ಗೇಮ್ಸ್ಕ್ರಾಫ್ಟ್ ಫೌಂಡೇಷನ್ ನೆರವಾಗಲಿದೆ. ಇದರೊಂದಿಗೆ ಗೇಮ್ಸ್ಕ್ರಾಫ್ಟ್ ಕ್ರೀಡೆಗಳ ಅಭಿವೃದ್ಧಿಗೆ ತನ್ನ ಬದ್ಧತೆಯ ಮೊದಲ ಹೆಜ್ಜೆ ಇಟ್ಟಿದ್ದು, ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಯಶಸ್ಸಿನ ಕತೆಗಳಿಗೆ ಪ್ರೇರಣೆಯಾಗಲು ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಸಹಭಾಗಿತ್ವಕ್ಕೆ ಮುನ್ನುಡಿ ಬರೆದಿದೆ.
ಗೇಮ್ಸ್ಕ್ರಾಫ್ಟ್ ಗ್ರೂಪ್ನ ಗ್ರೂಪ್ ಸಿಇಒ ವಿಕಾಸ್ ತನೇಜಾ ಮಾತನಾಡಿ “ನಮಗೆ ತಮ್ಮ ಕೌಶಲ್ಯಗಳಿಂದ ಪ್ರೇರಣೆ ನೀಡಿದ ಸಮುದಾಯ ಮತ್ತು ವ್ಯಕ್ತಿಗಳಿಗೆ ಹಿಂದಿರುಗಿ ಕೊಡುಗೆ ನೀಡುವುದು ಕಾರ್ಪೊರೆಟ್ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ ಎನ್ನುವುದು ನಮ್ಮ ನಿಲುವು. ಕ್ರೀಡೆಗಳ ಅಭಿವೃದ್ಧಿಗೆ ನಾವು ಹೆಚ್ಚು ಗಮನ ಹರಿಸುತ್ತಿದ್ದು, ಈ ನಿಟ್ಟಿನಲ್ಲಿ ಅಂಜು ಬಾಬ್ಬಿ ಸ್ಪೋರ್ಟ್ಸ್ ಫೌಂಡೇಷನ್ ಜೊತೆಗೆ ಪ್ರಯಾಣ ಆರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅಕಾಡೆಮಿಯ ಕುರಿತು ಅಂಜು ಅವರು ಹೊಂದಿರುವ ಗುರಿಗಳು ನಮ್ಮ ದೇಶದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರ ಕನಸು ಈಡೇರಿಸುವ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿವೆ” ಎಂದು ಪ್ರಶಂಸಿಸಿದರು.
ಎಬಿಎಸ್ಎಫ್, ವಿಶ್ವ ಅಥ್ಲೆಟಿಕ್ಸ್ನಲ್ಲಿ ಭಾರತದ ಏಕೈಕ ಹಿರಿಯ ಚಾಂಪಿಯನ್ಷಿಪ್ ಮತ್ತು ಪದಕ ವಿಜೇತರಾದ ಅಂಜು ಬಾಬ್ಬಿ ಜಾರ್ಜ್ ಮತ್ತು ಅವರ ಕೋಚ್ ಬಾಬ್ಬಿ ಜಾರ್ಜ್ ಅವರ ಕನಸಿನ ಕೂಸಾಗಿದೆ. ಮುಂದಿನ ಪೀಳಿಗೆಯ ವಿಶ್ವ ದರ್ಜೆಯ ಅಥ್ಲೆಟಿಕ್ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ, ಬೆಳೆಸುವ ಉದ್ದೇಶವನ್ನು ಇದು ಹೊಂದಿದೆ. ಇದಕ್ಕಾಗಿ ಬೆಂಗಳೂರಿನ ಕೆಂಗೇರಿಯಲ್ಲಿ ಅಕಾಡೆಮಿ ವಿಶ್ವದರ್ಜೆಯ ಕೋಚಿಂಗ್ ಕೇಂದ್ರವನ್ನು ಆರಂಭಿಸುತ್ತಿದ್ದು, ಅಂಜು ಮತ್ತು ಬಾಬ್ಬಿ ಅವರ ಕಲ್ಪನೆಯಂತೆಯೇ ಎಲ್ಲ ಸೌಲಭ್ಯಗಳ್ನು, ತರಬೇತಿ ಮಾದರಿಗಳು ಮತ್ತು ಅನುಭವಗಳನ್ನು ಇದು ಒಳಗೊಳ್ಳಲಿದೆ. ಹೊರಾಂಗಣ ಓಟದ ಟರ್ಫ್ನಿಂದ ಕೋಚಿಂಗ್ಗೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ಇದು ಹೊಂದಿರಲಿದೆ.
ಎಬಿಎಸ್ಎಫ್ ಸ್ಥಾಪಕರಾದ ಅಂಜು ಬಾಬ್ಬಿ ಜಾರ್ಜ್ ಮಾತನಾಡಿ “ನಾಳಿನ ತಾರೆಯರನ್ನು ತರಬೇತುಗೊಳಿಸುವ ಸೌಕರ್ಯಗಳ ಅಭಿವೃದ್ಧಿಗಾಗಿ ಗೇಮ್ಸ್ಕ್ರಾಫ್ಟ್ ಫೌಂಡೇಷನ್ನಿಂದ ದೊರೆತ ನೆರವು ಸಂತೋಷ ತಂದಿದೆ. ನಮ್ಮ ಬದುಕನ್ನು ರೂಪಿಸಿದ ಕ್ರೀಡೆಗಳಿಗೆ ಪ್ರತಿಫಲ ನೀಡುವ ಅವಕಾಶವನ್ನು ಇದು ಕೊಟ್ಟಿದೆ. ಅಕಾಡೆಮಿಯನ್ನು ವಿಶ್ವದರ್ಜೆಯ ತಾಣವನ್ನಾಗಿ ಬೆಳೆಸಿ, ಪ್ರತಿಭಾವಂತ ಅಥ್ಲೀಟ್ಗಳನ್ನು ಆಹ್ವಾನಿಸಿ ಉತ್ತೇಜಿಸಿ ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ” ಎಂದು ತಿಳಿಸಿದರು.
ವ್ಯಕ್ತಿ ಮತ್ತು ಸಮೂಹಗಳ ಸಬಲೀಕರಣಗಳದ ಪ್ರಯಾಣವನ್ನು ಗೇಮ್ಸ್ಕ್ರಾಫ್ಟ್ ಫೌಂಡೇಷನ್ ಈಗ ಆರಂಭಿಸಿದ್ದು, ಅವರ ಅಭಿವೃದ್ಧಿ ಮತ್ತು ಯಶಸ್ಸಿಗೆ ಹೃತ್ಪೂರ್ವಕ ಬೆಂಬಲ ನೀಡಿ, ಸಮುದಾಯಕ್ಕೆ ತನ್ನ ಪಾಲನ್ನು ವಾಪಸ್ ನೀಡಲು ಮುಂದಾಗಿದೆ.