ಬೆಂಗಳೂರು: ಬಿಜೆಪಿಯಿಂದ ಕಾಂಗ್ರೆಸ್ ಗೆ ವಲಸೆ ಬರುವವರಿಗೆ ಸಂಪರ್ಕ ಸೇತುವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ಆಪರೇಷನ್ ಹಸ್ತದ ವಿಚಾರವಾಗಿ ಕಾಂಗ್ರೆಸ್ ಎಂಎಲ್ಸಿ ಜಗದೀಶ ಶೆಟ್ಟರ್ ಮತ್ತೆ ಸುಳಿವು ನೀಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬಳಿ 42 ಜನರ ಲಿಸ್ಟ್ ಇದೆ ಎಂದು ಮಂಗಳವಾರ ಹೇಳಿದ್ದಾರೆ.
ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ಡಿಸಿಎಂಗೆ ನನ್ನನ್ನು ಭೇಟಿ ಮಾಡಿದವರ ಮಾಹಿತಿ ನೀಡಿದ್ದೇನೆ. ನನ್ನ ಕಡೆ ಬಂದವರನ್ನು ನಾಯಕರಿಗೆ ಪರಿಚಯ ಮಾಡಿಸ್ತೇನೆ ಅಷ್ಟೇ. ನನ್ನನ್ನು ಹಾಲಿ ಶಾಸಕರು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.
ಆಪರೇಷನ್ ಹಸ್ತಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದಲೂ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಮಧ್ಯೆ, ನಾವು ಯಾರನ್ನೂ ಸೆಳೆಯುತ್ತಿಲ್ಲ, ತಾವಾಗಿ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದು ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡಿದ್ದರು. ಆದರೆ, ಇದೀಗ ಡಿಕೆ ಶಿವಕುಮಾರ್ ಬಳಿ 42 ಜನರ ಪಟ್ಟಿ ಇದೆ ಎನ್ನುವ ಮೂಲಕ ಶೆಟ್ಟರ್ ಅವರು ಬಹಿರಂಗವಾಗಿ ಆಪರೇಷನ್ ಹಸ್ತದ ಬಗ್ಗೆ ಸುಳಿವು ನೀಡಿದಂತಾಗಿದೆ.
ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿಯಲ್ಲಿ ಇರುವವರು ಸತ್ಯಹರಿಶ್ಚಂದ್ರರಾ ಎಂದು ಪ್ರಶ್ನಿಸಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹತ್ತಾರು ಹಗರಣಗಳ ಬಗ್ಗೆ ಕೇಳಿ ಬಂತು. ಇವರ ಹೇಳಿಕೆಯಿಂದ ಇಡೀ ರಾಜಕೀಯ ಅಸಹ್ಯ ಪಡುವಂತೆ ಆಗುತ್ತಿದೆ. ತಾವು ಸತ್ಯಹರಿಶ್ಚಂದ್ರರು ಎಂದು ಬಿಜೆಪಿಯವರು ಹೇಳಲಿ ನೋಡೋಣ ಎಂದು ಶೆಟ್ಟರ್ ಸವಾಲು ಹಾಕಿದ್ದಾರೆ.