ಬೆಂಗಳೂರು: ಮಹತ್ವದ ನಿರ್ಧಾರವೊಂದರಲ್ಲಿ ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು 13 ದಂಪತಿಗಳಿಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಅವಕಾಶ ಕಲ್ಪಿಸಿದೆ.
2023ರ ಮಾರ್ಚ್ 14ರಿಂದ ಜಾರಿಗೆ ಬಂದಿರುವ ಬಾಡಿಗೆ ತಾಯ್ತನ ತಿದ್ದುಪಡಿ ನಿಯಮ 7 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ನೂತನ ತಿದ್ದುಪಡಿ ಪ್ರಕಾರ ದಾನಿಗಳ ವೀರ್ಯ ಪಡೆಯಲು ನಿರ್ಬಂಧವಿದೆ. ಆದರೆ, ಎಲ್ಲವನ್ನೂ ಏಕರೂಪದಲ್ಲಿ ಗಮನಿಸುವುದು ಸರಿಯಲ್ಲ. ಪ್ರತಿಯೊಂದನ್ನೂ ಆಯಾ ಪ್ರಕರಣಕ್ಕೆ ತಕ್ಕಂತೆ ಗಮನಿಸಿ, ನಿಯಮಗಳನ್ನು ಆಧರಿಸಿ ಸಡಿಲಗೊಳಿಸಬಹುದು’ ಎಂದು ಆದೇಶಿಸಿದೆ.
13 ದಂಪತಿಗಳು ಸಲ್ಲಿಸಿದ್ದ ಅರ್ಜಿಗಳ ಪ್ರಕಾರ, ಎಲ್ಲಾ ಹೆಂಡತಿಯರು ಆರೋಗ್ಯ ಸಮಸ್ಯೆಗಳಿಂದ ಗರ್ಭ ಧರಿಸಲು ಸಾಧ್ಯವಾಗಲಿರಲ್ಲ. ಈ ಪೈಕಿ ಒಂದು ಪ್ರಕರಣದಲ್ಲಿ ಒಬ್ಬರಿಗೆ ಹೃದಯದ ಕಾಯಿಲೆಯೂ ಸೇರಿದೆ ಎಂದು ತಿಳಿದುಬಂದಿದೆ. ಮಾರ್ಚ್ 14, 2023 ರಂದು, ಕೇಂದ್ರ ಸರ್ಕಾರವು ಬಾಡಿಗೆ ತಾಯ್ತನದ ನಿಯಮಗಳ ಫಾರ್ಮ್ ಸಂಖ್ಯೆ 2 ರ ಷರತ್ತು (1)(ಡಿ) ಅನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಹೊರಡಿಸಿತ್ತು.