ಬೆಂಗಳೂರು: ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ಬಗ್ಗೆ ಕನ್ನಡ ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು, ಮಹಾರಾಷ್ಟ್ರ ನೋಂದಣಿ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ಟ್ರಕ್ ಗಳ ಮೇಲೆ ಉದ್ರಿಕ್ತ ಗುಂಪು ದಾಳಿ ನಡೆಸಿದೆ.
ಹಿಂಸಾಚಾರದ ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಮತ್ತು ನೂರಾರು ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರ ಪ್ರಕಾರ, ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಾರ್ಯಕರ್ತರು ಮಹಾರಾಷ್ಟ್ರದ ಕಡೆಗೆ ಚಲಿಸುತ್ತಿದ್ದ ಐದು ಟ್ರಕ್ ಗಳ ಮೇಲೆ ಕಲ್ಲುಗಳನ್ನು ಎಸೆದಿದ್ದರು.
ಅವರು ಟ್ರಕ್ ಗಳ ಮೇಲೆ ಹತ್ತಿ ಮಹಾರಾಷ್ಟ್ರದ ರಾಜಕಾರಣಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರು ನೋಂದಣಿ ಫಲಕಗಳನ್ನು ಕಿತ್ತು ವಾಹನಗಳಿಗೆ ಕಪ್ಪು ಬಣ್ಣ ಬಳಿದರು.
ಪ್ರತಿಭಟನಾಕಾರರು ಕನ್ನಡ ಬಾವುಟಗಳೊಂದಿಗೆ ಪೊಲೀಸ್ ವಾಹನಗಳ ಮೇಲೆ ಹತ್ತಿ ಘೋಷಣೆಗಳನ್ನು ಕೂಗಿದರು.
ಮಹಾರಾಷ್ಟ್ರದ ಮಂತ್ರಿಗಳು ತಮ್ಮ ಭೇಟಿಯನ್ನು ನಿಲ್ಲಿಸುತ್ತಿದ್ದಂತೆ, ಕರ್ನಾಟಕದ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕನ್ನಡ ಹೋರಾಟಗಾರರನ್ನು ಬೆಳಗಾವಿ ನಗರವನ್ನು ಪ್ರವೇಶಿಸದಂತೆ ತಡೆದರು.