ಬೆಂಗಳೂರು: ದೇಶದಲ್ಲಿ ಹಲವು ಭಾಷೆಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆ ಇಟ್ಟಿರುವ ಕೇಂದ್ರ ಗೃಹ ಸಚಿವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರು ಸ್ಥಳೀಯ ಭಾಷೆಗಳನ್ನು ಎತ್ತಿ ಹಿಡಿಯುವುದಾಗಿ ಹೇಳಿ ಹಿಂದಿ ಹೇರಲು ಹೊರಟಿದ್ದಾರೆ. ಇದು ಸರಿಯಲ್ಲ, ನಾವು ಒಪ್ಪುವುದಿಲ್ಲ” ಎಂದು ಅವರು ಸಮರ್ಥಿಸಿಕೊಂಡರು.
“ಪ್ರಧಾನಿ ನರೇಂದ್ರ ಮೋದಿ ಅವರೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಗೃಹ ಸಚಿವರಿಗೆ ಅರಿವು ಮೂಡಿಸಬೇಕು. ಮತ್ತೆ ಮತ್ತೆ ಭಾಷೆಗಳ ವಿಷಯದ ಮೇಲೆ ಕೂರುವುದು ಸರಿಯಲ್ಲ. ಈ ರೀತಿ ಮಾಡಿದರೆ ದೇಶದ ಅಖಂಡತೆ, ಏಕತೆಗೆ ಧಕ್ಕೆಯಾಗುತ್ತದೆ. ಈ ಸಂಬಂಧ ಗೃಹ ಸಚಿವರ ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ‘ಒಂದು ರಾಷ್ಟ್ರ ಒಂದು ಭಾಷೆ’ ನೀತಿಯನ್ನು ತರುವ ಮೂಲಕ ಬಿಜೆಪಿ ನಾಯಕರು ಇತರ ಭಾಷೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇತರ ಭಾಷೆಗಳನ್ನು ನಾಶಪಡಿಸಿ ರಾಷ್ಟ್ರವನ್ನು ಕಟ್ಟುವುದು ಹೇಗೆ?” ಎಂದು ಪ್ರಶ್ನಿಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ರಾಷ್ಟ್ರಕ್ಕೆ ಮಾರಕ, ಅವು ಒಂದೇ ನಾಣ್ಯದ ಎರಡು ಮುಖಗಳು. ಒಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಇನ್ನೊಂದೆಡೆ ಜನಸಂಕಲ್ಪ ಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಈಗ ಭಾಷೆಯನ್ನು ಸಾಧನವನ್ನಾಗಿ ಮಾಡಿಕೊಂಡು ದಬ್ಬಾಳಿಕೆ ಆರಂಭಿಸಿವೆ. ದಕ್ಷಿಣ ಭಾರತದಲ್ಲಿ ಜನ ರಾಷ್ಟ್ರೀಯ ಪಕ್ಷಗಳ ಬಾಗಿಲು ಹಾಕಿದ್ದಾರೆ. ಕರ್ನಾಟಕದಲ್ಲೂ ಆ ದಿನ ದೂರವಿಲ್ಲ ಎಂದರು.