ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆಯ ಕಾರ್ಯಕ್ರಮಗಳನ್ನು 19 ಗಡಿ ಜಿಲ್ಲೆಗಳಲ್ಲಿ ಆಚರಿಸಲು ತೀರ್ಮಾನ ಮಾಡಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ತಿಳಿಸಿದರು.
ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ, ಆಲೂರು ವೆಂಕಟರಾಯರ ಜನ್ಮದಿನಾಚರಣೆ ಹಾಗೂ ಫ.ಗು. ಹಳಕಟ್ಟಿ ಅವರ ದಿವ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ಮಾತನಾಡಿ, ಕನ್ನಡ ಭಾಷೆಗೆ ಇಡೀ ಜಗತ್ತಿನಲ್ಲಿಯೇ ಸಮೃದ್ಧ ಭಾಷೆ ಎಂದು ಕನ್ನಡ ಭಾಷೆಯ ಮಹತ್ವವನ್ನು ವಿವರಿಸಿದರು ಮೊದಲು ನಂತರ ಆಂಗ್ಲಭಾಷೆಗೆ ಒತ್ತು ಕೊಡುವುದಾಗಿ ಹೇಳಿದರು.
ಸಾಹಿತಿ, ಚಿಂತಕರಾದ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಪೂಜ್ಯಶ್ರೀ ಆಲೂರು ವೆಂಕಟರಾಯರು ಕನ್ನಡಕ್ಕಾಗಿ ನೀಡಿರುವ ಕೊಡುಗೆ ಅಪಾರ. ಅವರನ್ನು ನಾವು ದಿನಾ ಸ್ಮರಣೆ ಮಾಡುವುದು ಅಗತ್ಯ ಎಂದು ತಿಳಿಸಿ ಕರ್ನಾಟಕದ ಏಕೀಕರಣಕ್ಕಾಗಿ ನೀಡಿರುವ ಕೊಡುಗೆ ಬಗ್ಗೆ ಹಾಗೂ ಅವರು ಬರೆದಿರುವ ಪ್ರಸಿದ್ಧ ಹಾಗೂ ಕನ್ನಡಿಗರ ಕಣ್ಣು ತೆರೆಸಿದ ಕೃತಿಯಾದ ‘ಕರ್ನಾಟಕ ಗತವೈಭವ’ ಕೃತಿಯ ಬಗ್ಗೆ ಮಾಹಿತಿ ನೀಡಿದರು.
ಬೆಳಗಾವಿಯನ್ನು ಕರ್ನಾಟಕದಿಂದ ಹೊರಹಾಕಿದರೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುತ್ತೇನೆ ಎಂದು ನೆಹರುರವರಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಿ.ಡಿ ಜತ್ತಿಯವರು ಹೇಳಿದ ಮಾತನ್ನು ಅರವಿಂದ ಜತ್ತಿ ಬಸವ ಸಮಿತಿ ಅಧ್ಯಕ್ಷರು, ಸ್ಮರಿಸಿದರು ಹಾಗೂ ಫ.ಗು. ಹಳಕಟ್ಟಿ ಅವರ ಬಗ್ಗೆ ಮಾತನಾಡಿ ಸದರಿಯವರು ವಚನ ಸಾಹಿತ್ಯ ರಚನೆ ಮಾಡದಿದ್ದರೆ ಇತಿಹಾಸವೇ ಒಂದು ಹೊಸ ರೂಪ ಪಡೆಯುತ್ತಿತ್ತು. ವಚನ ಸಾಹಿತ್ಯ ರಚನೆಯಾದ ಮೇಲೆ ಕನ್ನಡ ಸಾಹಿತ್ಯದ ಬಸವಣ್ಣ ರವರನ್ನು ಪರಿಚಯಿಸಿದವರು ಫ.ಗು. ಹಳಕಟ್ಟಿ ಎಂಬುದಾಗಿ ತಿಳಿಸಿದರು.
ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ, ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಇದ್ದರು.