ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಈ ಹಬ್ಬವನ್ನು ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗದಂತೆ, ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಬಿಬಿಎಂಪಿ ತಿಳಿಸಿದೆ. ಈ ಹಿನ್ನೆಲೆ, ಶಬ್ದಮಾಲಿನ್ಯ, ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಸಿಡಿಸಬಾರದು. ಹಸಿರು ಪಟಾಕಿಯನ್ನೇ ಬಳಸಬೇಕು. ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ಎಂದು ಬಿಬಿಎಂಪಿ ಹೇಳಿದೆ.
ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ಆಚರಿಸಬೇಕು ಎಂದು ‘ಸ್ವಚ್ಚ ದೀಪಾವಳಿ- ಶುಭ ದೀಪಾವಳಿ’ ಅಭಿಯಾನ ಆರಂಭಿಸಿದೆ.
ಸುಪ್ರೀಂ ಕೋರ್ಟ್ ಆದೇಶ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು. ಪಟಾಕಿಗಳ ಪ್ಯಾಕೆಟ್ಗಳ ಮೇಲೆ ಹಸಿರು ಚಿನ್ಹೆಯನ್ನು ಖಚಿತಪಡಿಕೊಳ್ಳಬೇಕು. ಕ್ಯೂಆರ್ ಕೋಡ್ ಮೂಲಕ ಪಟಾಕಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು. ಈ ಬಗ್ಗೆ ಘನತ್ಯಾಜ್ಯ ವಿಭಾಗದ ಆಟೊ ಟಿಪ್ಪರ್ಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಂದೇಶ ಪ್ರಚಾರ ಮಾಡಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಕೇಂದ್ರ ಸರ್ಕಾರ ‘ಸ್ವಚ್ಛ ಭಾರತ’ ಯೋಜನೆ 2.0 ಅಡಿಯಲ್ಲಿ ‘ಸ್ವಚ್ಛ ದೀಪಾವಳಿ- ಶುಭ ದೀಪಾವಳಿ’ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ‘My Gov Portal’ ನಲ್ಲಿ ಅಥವಾ ವೆಬ್ ಲಿಂಕ್ (https://pledge.mygov.in/swachh-diwali-shubh-diwali/) ನೋಂದಾಯಿಸಿಕೊಂಡು ಅಭಿಯಾನಕ್ಕೆ ಕೈ ಜೋಡಿಸಬೇಕು. ‘ಪರಿಸರ ಸ್ನೇಹಿ ಸ್ಥಳೀಯ ಉತ್ಪನ್ನಗಳನ್ನು ಬಳಸಲು ನಾನು ಬದ್ಧನಾಗಿದ್ದೇನೆ. ಏಕ ಬಳಕೆಯ ಪ್ಲಾಸ್ಟಿಕ್ ಬೇಡ. ಹಸಿರು ದೀಪಾವಳಿಯನ್ನು ಆಚರಿಸುತ್ತೇನೆ’ ಎಂದು ಪ್ರಮಾಣ ಮಾಡಬೇಕು’ ಎಂದು ಹೇಳಿದರು.