ಬೆಂಗಳೂರು: ಏಕದಿನ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ್ದ ಪಾಕಿಸ್ತಾನ, ಇದೀಗ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಉಭಯ ತಂಡಗಳ ಈ ಕದನ ಅಕ್ಟೋಬರ್ 20 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ಪಂದ್ಯಕ್ಕೆ ಸಕಲ ಸಿದ್ದತೆಗಳನ್ನು ಕೆಎಸ್ಸಿಎ ಮಾಡಿಕೊಂಡಿದೆ. ಇತ್ತ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಹಿಸಿರುವ ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೈಅಲರ್ಟ್ ಘೋಷಿಸಿದ್ದಾರೆ.
ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಲು ಕೆಲವು ಸಂಘನೆಗಳು ತಯಾರಿ ನಡೆಸಿವೆ ಎಂದು ವರದಿಯಾಗಿದೆ. ವಾಸ್ತವವಾಗಿ ಪಂದ್ಯ ನಡೆಯುವ ವೇಳೆ ಪ್ಯಾಲೆಸ್ಟೈನ್ಗೆ ಬೆಂಬಲ ನೀಡುವ ಪೊಸ್ಟರ್ ಹಾಗೂ ಫ್ಲಕಾರ್ಡ್ಗಳನ್ನು ಹಿಡಿದು ಘೋಷಣೆ ಕೂಗಲು ಹಲವು ಸಂಘಟನೆಗಳನ್ನು ತಯಾರಿ ನಡೆಸಿವೆ ಎಂಬ ಮಾಹಿತಿ ಬೆಂಗಳೂರು ಪೊಲೀಸರಿಗೆ ಲಭಿಸಿದ್ದು, ಈ ಹಿನ್ನಲೆಯಲ್ಲಿ ಮತ್ತಷ್ಟು ಅಲರ್ಟ್ ಆಗಿರುವ ಪೊಲೀಸರು ಮ್ಯಾಚ್ ವಿಕ್ಷಣೆಗೆ ಬರುವವರ ಮೇಲೆ ಹದ್ದಿನಕಣ್ಣಿಡಲು ತೀರ್ಮಾನಿಸಿದೆ.