ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸತಾಗಿ 4000 ಬಸ್ಸುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು,ಅದೇ ಕಾಲಕ್ಕೆ ಸಂಸ್ಥೆಯ ನಷ್ಟವನ್ನು ತಪ್ಪಿಸಲು ನಾಲ್ಕೂ ನಿಗಮಗಳಗಳನ್ನು ವಿಲೀನಗೊಳಿಸಲು ಸಜ್ಜಾಗಿದೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ದಶಕಗಳ ಕಾಲದಿಂದ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟವನ್ನು ತಪ್ಪಿಸಲು ನಾಲ್ಕೂ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಲು ಶ್ರೀನಿವಾಸಮೂರ್ತಿ ಸಮಿತಿ ಶಿಫಾರಸು ಮಾಡಿದೆ ಎಂದರು.
ನಾಲ್ಕು ನಿಗಮಗಳು ಅಸ್ತಿತ್ವದಲ್ಲಿರುವುದರಿಂದ ಆಡಳಿತಾತ್ಮಕ ಹೊರೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಅಸ್ತಿತ್ವದಲ್ಲಿರುವಂತೆ ಮಾಡಿದರೆ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಷ ತಪ್ಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇವತ್ತು ನಾಲ್ಕು ಪ್ರತ್ಯೇಕ ನಿಗಮಗಳಿರುವುದರಿಂದ ಎಲ್ಲ ನಿಗಮಗಳು ತಮ್ಮ ತಮ್ಮ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳುತ್ತವೆ.ಹೀಗಾಗಿ ಬಹುತೇಕ ಸಲ ಬಸ್ಸುಗಳು ಕಡಿಮೆ ಪ್ರಯಾಣಿಕರೊಂದಿಗೆ ಸಂಚರಿಸುವಂತಾಗಿ ನಷ್ಟದ ಪ್ರಮಾಣ ಹೆಚ್ಚುತ್ತದೆ.
ಎಲ್ಲ ನಿಗಮಗಳು ವಿಲೀನವಾದಾಗ ಅಗತ್ಯಕ್ಕನುಗುಣವಾಗಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಬಹುದು,ಕಡಿಮೆ ಪ್ರಯಾಣಿಕರಿದ್ದರೆ ಅಂತಹ ಬಸ್ಸುಗಳಲ್ಲಿದ್ದವರಿಗೆ ಅದೇ ಮಾರ್ಗದಲ್ಲಿರುವ ಬೇರೆ ಬಸ್ಸುಗಳಲ್ಲಿ ಸೀಟು ಕಲ್ಪಿಸಬಹುದು. ಕೋವಿಡ್ ಕಾಲದಲ್ಲಿ ಸಾರಿಗೆ ಸಂಸ್ಥೆ ಆದಾಯವಿಲ್ಲದೆ ಬಳಲಿತ್ತು.ಆದರೆ ಸಾರಿಗೆ ನೌಕರರ ವೇತನ ನೀಡುವ ಸಲುವಾಗಿ ರಾಜ್ಯ ಸರ್ಕಾರ 6000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಅನುಕೂಲ ಒದಗಿಸಿತು.
ಈಗ ಪರಿಸ್ಥಿತಿ ಸುಧಾರಿಸಿದ್ದರೂ ಸಾರಿಗೆ ಸಂಸ್ಥೆಯ ನಷ್ಟ ಮಾತ್ರ ತಪ್ಪಿಲ್ಲ.ಹೀಗಾಗಿ ಶ್ರೀನಿವಾಸ ಮೂರ್ತಿಯವರ ಶಿಫಾರಸಿನಂತೆ ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳನ್ನು ವಿಲೀನಗೊಳಿಸಲು ಬಯಸಲಾಗಿದೆ ಎಂದು ವಿವರಿಸಿದರು. ಸಾರಿಗೆ ಸಂಸ್ಥೆಗೆ ಹೊಸತಾಗಿ ನಾಲ್ಕು ಸಾವಿರ ಬಸ್ಸುಗಳನ್ನು ಖರೀದಿಸಲಾಗುವುದು ಎಂದ ಅವರು,ಈಗಿರುವ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ತಲಾ ಒಂದು ಸಾವಿರ ಹೆಚ್ಚುವರಿ ಬಸ್ಸುಗಳ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.
ಈ ಮಧ್ಯೆ ಬಿಎಂಟಿಸಿಗೆ ಒಂದೂವರೆ ಸಾವಿರ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಬಯಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ಈ ಮಧ್ಯೆ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ಒಂಭತ್ತರಿಂದ ಹತ್ತು ಲಕ್ಷ ಕಿಲೋಮೀಟರ್ ವರೆಗೆ ಸಂಚರಿಸಿದ ಬಸ್ಸುಗಳಿದ್ದು,ಇವನ್ನು ತಲಾ ಮೂರುವರೆ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪುನರ್ ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ. ಟೈರು, ಎಂಜಿನ್ನು ಬದಲಿಸಿ ಹೊಸತಾಗಿ ಅಳವಡಿಸುವ ಮೂಲಕ ಪುನರ್ ನವೀಕರಣಗೊಂಡ ಬಸ್ಸುಗಳನ್ನು ಪ್ರಾಯೋಗಿಕವಾಗಿ ನಿಗಮಗಳಿಗೆ ಒದಗಿಸಲಾಗಿದ್ದು,ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.