ರಾಮನಗರ: ತಾವು ಆದರ್ಶ ರಾಜಕಾರಣಿ, ಸ್ವಯಂ ಘೋಷಿತ ದೇವ ಮಾನವರಂತೆ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂತಕಲ್ ಮೈನಿಂಗ್ ಕಂಪನಿಗೆ ಅಕ್ರಮವಾಗಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿರುವ ಹಾಗೂ ಖಾಸಗಿ ಸಹಕಾರ ಸೊಸೈಟಿಗೆ 80 ಎಕರೆ ಭೂಮಿ ಮಂಜೂರಾತಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪ ಹೊತ್ತಿರುವ ಕುಮಾರಸ್ವಾಮಿ ತನಿಖೆ ಎದುರಿಸ ಬೇಕಾಗಿರುವುದನ್ನು ಮರೆಯಬಾರದು. ಯಡಿಯೂರಪ್ಪ ದೋಷಿಯೊ ಅಥವಾ ನಿರ್ದೋಷಿಯೇ ಎಂಬುದನ್ನು ನ್ಯಾಯಾಲಯ ಹೇಳಬೇಕೆ ವಿನಃ ಕುಮಾರಸ್ವಾಮಿ ಕುಟುಂಬದವರಲ್ಲ. ಯಡಿಯೂರಪ್ಪ ಸೂರ್ಯನಂತಿದ್ದರೆ, ಕುಮಾರಸ್ವಾಮಿ ಸೂರ್ಯನ ಎದುರು ಪಟಾಕಿ ಇದ್ದಂತೆ ಎಂದು ತೇಜಸ್ವಿನಿ ಕಿಡಿಕಾರಿದರು.
ಒಕ್ಕಲಿಗ ಸಮುದಾಯಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ. ಒಕ್ಕಲಿಗ ನಾಯಕರ ಬೆಳವಣಿಗೆಯನ್ನೇ ಸಹಿಸದ ಗೌಡರ ಕುಟುಂಬ ಬೇರೆ ವರ್ಗಗಳ ನಾಯಕರ ಬೆಳವಣಿಗೆಯನ್ನು ಹೇಗೆ ಸಹಿಸುತ್ತಾರೆ. ಇದನ್ನು ಜೆಡಿಎಸ್ ನಲ್ಲಿರುವ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ದುರ್ಯೋಧನ, ದುಶ್ಯಾಸನರಂತಹ ನಾಯಕರಿದ್ದರೆ ಎಂದು ಹೇಳಿದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಕುಮಾರಸ್ವಾಮಿ ಹೆಗಲು ಮುಟ್ಟಿಕೊಂಡು ನೋಡುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ನಾನು ರಾವಣನಿಗೆ ಹೋಲಿಸಲಿಲ್ಲ. ಬದಲಿಗೆ ಕೌರವರು ಎಂದು ಹೇಳಿದೆ. ದುರ್ಯೋಧನ ತೋಳ್ಬಲ ಪ್ರದರ್ಶನ ಮಾಡಿ ಗುಣವಾಶೇಷಗಳಿಗೆ ಹೆಸರಾದವನು. ಈ ಪದವನ್ನು ರಾಜಕೀಯ ಭಾಷೆಯಲ್ಲಿ ಗೌರವಾನ್ವಿತವಾಗಿ ಬಳಕೆ ಮಾಡಿದೆ. ಮಹಾಭಾರತದ ಜ್ಞಾನ ಇಲ್ಲದಿದ್ದರೆ ಕುಮಾರಸ್ವಾಮಿರವರು ಯಾರಾದರೂ ಶಿಕ್ಷಕನ್ನು ಇಟ್ಟುಕೊಂಡು ತಿಳಿದುಕೊಳ್ಳಲಿ ಎಂದು ಹೇಳಿದರು.