ಬೆಂಗಳೂರು : ಹುಬ್ಬಳ್ಳಿ ಗಲಾಟೆ ವಿಚಾರವಾಗಿ ಈಗಾಗಲೇ ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡುತ್ತೇವೆ. ಕಾನೂನು ಕೈಗೆ ತೆಗೊಂಡರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಅಕ್ಷಮ್ಯ ಅಪರಾಧ.
ಅವರ ವಿರುದ್ಧವಾಗಿ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆರ್ ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಹೈಕಮಾಂಡ್ ಕರೆದಾಗ ಹೋಗುತ್ತೇನೆ. ಮೊದಲು ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ಕೊಡುತ್ತೇನೆ ಎಂದರು.
ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸ ಹೋಗುತ್ತಿದ್ದೇನೆ. ಇಂದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರವಾಸವಿದೆ. ಇಂದು ಶೃಂಗೇರಿ ಮತ್ತು ಹರಿಹರಪುರಕ್ಕೆ ಹೋಗುತ್ತಿದ್ದೇನೆ. ಶಿವಮೊಗ್ಗದಲ್ಲಿ ಪಾರ್ಟಿಯ ವಿವಿಧ ಸಂಘಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ನಾಳೆ ಕಲಬುರಗಿ ಜಿಲ್ಲೆಯ ಭೇಟಿಯಿದೆ. ಹಲವಾರು ಅಭಿವೃದ್ಧಿ ಜೊತೆಗೆ ಪಕ್ಷದ ಸಂಬಂಧಿಸಿದಂತೆ ಕಾರ್ಯಕ್ರಮವಿದೆ. ಕಾರಜೋಳ ಮತ್ತು ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ನೀರಾವರಿ ಸಂಬಂಧಿಸಿದಂತೆ ಕಾರ್ಯಕ್ರಮವಿದೆ ಎಂದರು.