ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿ ನೋವಿನಿಂದ ಬಳಲುತ್ತಿದ್ದು, ನಾಟಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಧ್ಯ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಬೊಮ್ಮಾಯಿ ಬೆಳಗಾವಿಯಲ್ಲಿ ಪ್ರಖ್ಯಾತ ರಾಜ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ ಟೆಕಲ್ ಎಂಬುವವರು ಮುಖ್ಯಮಂತ್ರಿಗಳಿಗೆ ಮಂಡಿ ನೋವಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮಂಡಿ ನೋವಿನ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳುತ್ತಿದ್ದು, ಸಂಕ್ರಾಂತಿ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
.ಈ ಮಧ್ಯೆ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದ ಲೋಕೇಶ ಟೇಕಲ್ ಎಂಬುವವರನ್ನು ಸಂಪರ್ಕಿಸಿ ಮಂಡಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಲೋಕೇಶ ಟೆಕಲ್ ಎಂಬ ನಾಟಿ ವೈದ್ಯರು ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದು, ಈ ವಿಷಯವನ್ನು ಲಕ್ಷಣ ಸವದಿ ಮೊನ್ನೆ ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ್ದಾರೆ. ಮೆಲ್ಮನೆಯಲ್ಲಿ ಆಯುಷ್ ವಿಧೇಯಕವನ್ನು ಮಂಡಿಸಲಾಗಿದೆ.
ನಾಟಿ ವೈದ್ಯ ಲೋಕೇಸ್ ಟೆಕಲ್ ಈಗಾಗಲೇ ಕ್ಯಾನ್ಸರ್, ಬ್ಲಾಕ್ ಫಂಗಸ, ಕೊರೋನಾ ಸೇರಿದಂತೆ ವಿವಿಧ ಖಾಯಿಲೆಗಳಿಗೆ ವನಸ್ಪತಿ ಔಷಧ ನೀಡಿ ಯಶಸ್ವಿಯಾಗಿದ್ದಾರೆ. ಸಧ್ಯ ಮುಖ್ಯಮಂತ್ರಿಗಳು ಮಂಡಿ ನೋವಿನಿಂದ ಗುಣಮುಖರಾಗುತ್ತಿದ್ದು, ಅವರಿಗೆ ದಿನಕ್ಕೆ ಎರಡು ಬಾರಿ ಔಷಧದ ಜೊತೆಗೆ ಮೇಕೆ ಹಾಲು ಕುಡಿಯುವಂತೆ ನಾಟಿ ವೈದ್ಯರು ಸಲಹೆ ನೀಡಿದ್ದಾರೆ. ಮೇಕೆ ಹಾಲಿನಲ್ಲಿ ವಿಟಮಿನ್ ಡಿ ಕೂಡಾ ಇರುವುದರಿಂದ ಅದು ಮೂಳೆಗಳು ಕ್ಯಾಲ್ಶಿಯಂ ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ. ಆರ್ತ್ರೈಟಿಸ್ ಹೊಂದಿರುವ ರೋಗಿಗಳಲ್ಲಿ ಆಸ್ಟಿಯೋಪೋರೋಸಿಸ್ ತಡೆಯುವಲ್ಲಿ ಮೇಕೆ ಹಾಲು ಸಶಕ್ತವಾಗಿದೆ ಎನ್ನಲಾಗಿದೆ. ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಚರ್ಮ ರೋಗದಿಂದ ಗುಣಮುಖರಾಗಿದ್ದು, ಅವರೇ ಮುಂದಾಗಿ ಮುಖ್ಯಮಂತ್ರಿಗಳಿಗೆ ನಾಟಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಬ್ಲಾಕ್ ಫಂಗಸನಿಂದಾಗಿ ಸಾವಿನ ಕದ ತಟ್ಟಿದ್ದ ಆನಂದ ಕುಲಾಲಿ ಎಂಬಾತನಿಗೂ, ಲಕ್ಷಣ ಸವದಿಯವರೇ ಚಿಕಿತ್ಸೆ ಕೊಡಿಸಿದ್ದು, ಸಧ್ಯ ಆನಂದ ಕುಲಾಲಿ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.