ಬೆಂಗಳೂರು, ಫೆ. 8 : ಕರ್ನಾಟಕದ ಹಲವೆಡೆ ಹಿಜಾಬ್ ವಿವಾದ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಹೈಕೋರ್ಟ್ ವಿಚಾರಣೆ ನಡುವೆಯೂ ಇಂದು ರಾಜ್ಯದ ಹಲವೆಡೆ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಭಟನೆ ತಾರಕಕ್ಕೇರಿ ಶಿವಮೊಗ್ಗದಲ್ಲಿ ಇಂದು ಲಘು ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು. ಹೈಕೋರ್ಟ್ ವಿಚಾರಣೆ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ‘ವಿದ್ಯಾರ್ಥಿಗಳು ಶಾಂತಿಯನ್ನು ಕಾಪಾಡಬೇಕು. ನಮಗೆ ವಿದ್ಯಾರ್ಜನೆ ಬಹಳ ಮುಖ್ಯ. ಯಾರು ಕೂಡಾ ಪ್ರಚೋದನೆ ಮಾಡುವ ಕೆಲಸ ಮಾಡಬಾರದು. ಹೈಕೋರ್ಟ್ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ’ ಎಂದರು. ಜೊತೆಗೆ ಪೊಲೀಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ನಿರ್ದೇಶನ ನೀಡಲಾಗಿದೆ. ಶಾಂತಿಯಿಂದಿದ್ದರೆ ಪರಿಹಾರ ಖಂಡಿತ, ಶಾಂತಿ ಕಾಪಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಮನವಿ ಮಾಡಿದರು.
ಶಾಲೆ, ಕಾಲೇಜ್ ಬಂದ್
‘ಈ ವಿಷಯ ಇತ್ಯಾರ್ಥ ಆಗುವ ವರೆಗೂ ಯಾರೂ ಕೂಡ ಶಾಂತಿ ಕದಡುವ ಪ್ರಯತ್ನ ಮಾಡಬಾರದು ಎಂದು. ಪ್ರಚೋದನಕಾರಿ ಹೇಳಿಕೆಯನ್ನು ಕೂಡ ಯಾರೂ ಕೊಡಬಾರದು. ಎಲ್ಲೆಲ್ಲಿ ಗಲಭೆ ಆಗಿದಿಯೋ ಅಲ್ಲಿ ಕೂಡಲೆ ಶಾಲಾ ಕಾಲೇಜು ಬಂದ್ ಮಾಡಿ ಎಂದು ಹೇಳಿದ್ದೇವೆ. ಹೈಕೋರ್ಟ್ ತೀರ್ಮಾನ ಕೊಡುವವರೆಗೂ ಎಲ್ಲಿ ಗಲಭೆ ಆಗಿದಿಯೋ ಅಲ್ಲಿ ಕಾಲೇಜು ಬಂದ್ ಮಾಡಲು ಹೇಳಿದ್ದೇವೆ. ನಾನು ಬೆಂಗಳೂರಿಗೆ ಹೋದ ಬಳಿಕ ಅಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಸಿಎಂ ಹೇಳಿಕೆ ನೀಡಿದ್ದಾರೆ.
ಈ ನಡುವೆ ಕರ್ನಾಟಕ ಸರ್ಕಾರದಿಂದ ಫೆಬ್ರವರಿ 9 ರಿಂದ 3 ದಿನ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲಾ ಶಾಲೆ-ಕಾಲೇಜು, ಇಂಜಿನಿಯರಿಂಗ್, ಪದವಿ ಕಾಲೇಜಗಳಿಗೆ ನಾಳೆಯಿಂದ ಮೂರು ದಿನ ರಜೆ ಘೋಷಣೆ ಮಾಡಲಾಗಿದೆ. ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಮನವಿ ಮಾಡಿದ್ದಾರೆ.
ಇನ್ನೂ ಕೇಸರಿ ಶಾಲು ಹಾಗೂ ಹಿಜಾಬ್ ವಿವಾದ ಶಿವಮೊಗ್ಗದಲ್ಲಿ ದಿನೇ ದಿನೇ ತಾರಕಕ್ಕೆ ಏರುತ್ತಿದೆ. ನಿನ್ನೆ ಕಾಲೇಜು ಆವರಣಗಳಿಗೆ ಸಿಮೀತವಾಗಿದ್ದ ವಿವಾದ ಇಂದು ರಸ್ತೆಗೆ ಬಂದಿದ್ದು, ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿದೆ. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಇಂದು ಕೇಸರಿ ಶಾಲನ್ನು ಧರಿಸಿದ್ದ ವಿದ್ಯಾರ್ಥಿಗಳು ಡಿಸಿ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದರು.
ಇತ್ತ ಹಿಜಾಬ್ ಬೆಂಬಲಿಸುವ ಗುಂಪು ಸಹ ಮೆರವಣಿಗೆ ಹೊರಡುವಾಗ ಪೊಲೀಸರು ತಡೆದರು.ಬಾಪೂಜಿ ನಗರ ಕಾಲೇಜಿನಿಂದ ಬಿ.ಹೆಚ್. ರಸ್ತೆಯ ಮೂಲಕ ಮೆರವಣಿಗೆ ನಡೆಸಲು ಮುಂದಾದ ಗುಂಪಿಗೆ ಎಸ್ಪಿ ಲಕ್ಷ್ಮಿ ಪ್ರಸಾದ್ ರವರು ಮೆರವಣಿಗೆ ನಡೆಸುವುದು ಬೇಡ ಎಂದು ಹೇಳಿದ್ರು. ಕೇಳದೆ ಹೋದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಇದರಿಂದ ಅರ್ಧ ಜನ ಓಡಿ ಹೋದರು.ಇಷ್ಟಾದರೂ ಸಹ ವಿದ್ಯಾರ್ಥಿನಿಯರು ನಮಗೆ ನ್ಯಾಯಬೇಕು ಎಂದು ಮೆರವಣಿಗೆ ಹೊರಟರು. ರಸ್ತೆಯ ಇನ್ನೂಂದು ಕಡೆ ಕೇಸರಿ ಬಾವುಟ ಹಿಡಿದ ವಿದ್ಯಾರ್ಥಿಗಳು ಅದೇ ರಸ್ತೆಗೆ ಬಂದರು. ಈ ವೇಳೆ ಪೊಲೀಸರು ಎರಡು ಕಡೆಯವರನ್ನು ಬೇರೆ ಬೇರೆ ರಸ್ತೆಯ ಕಡೆ ತಿರುಗಿಸಿದರು.
ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ಉದ್ವಿಗ್ನಕ್ಕೆ ಕಾರಣ ಆಗಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದು, ಪರಿಸ್ಥಿತಿ ನಿಭಾಯಿಸಲು ಮುಂದಾದ ಪೊಲೀಸರಿಗೆ ತಲೆಬಿಸಿಯಾಗಿದೆ.ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಹೊರಗಡೆಯಿಂದ ಕೆಲ ಯುವಕರು ಭಾಗಿಯಾಗಿ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲ ಪೊಲೀಸರನ್ನು ತಳ್ಳಿದ ಒಂದು ಕೋಮಿಗೆ ಸೇರಿದವರ ಮೇಲೆ ಕಾಲೇಜು ಆವರಣದಲ್ಲಿ ಪೋಲಿಸರು ಲಘು ಲಾಠಿ ಜಾರ್ಜ್ ಮಾಡಿದ್ದಾರೆ. ಪರಿಸ್ಥಿತಿ ಬಿಗಾಡಿಯಿಸಿದ್ದರಿಂದ ಅಶ್ರುವಾಯು ಕೂಡ ಸಿಡಿಸಲಾಯಿತು.