ಬೆಂಗಳೂರು, ಮಾ.15 : ಹಿಜಾಬ್ ಕುರಿತಂತೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ನೀಡಿದ ಸೂಚನೆ ಪರವಾಗಿ ತೀರ್ಪು ಬಂದಿದೆ. ಈ ತೀರ್ಪು ಎಲ್ಲರಿಗೂ ಸಂತೋಷ ತಂದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಕ್ಕಳು ಸಹ ಶಿಕ್ಷಣ ಪಡೆಯುವ ಹಕ್ಕನ್ನು ಎತ್ತಿ ಹಿಡಿದಿದೆ. ಈ ತೀರ್ಪು ನೀಡಿದ್ದಕ್ಕಾಗಿ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ದೇಶ ವಿದೇಶಗಳು ಈ ವಿವಾದವನ್ನು ಗಮನಿಸುತ್ತಿದ್ದವು ಎಂದು ಹೇಳಿದರು.
ವಿದ್ಯಾರ್ಥಿಗಳು ಧರ್ಮ-ಮತ ಎಂದು ತಲೆಯಲ್ಲಿ ತುಂಬಿಕೊಳ್ಳದೆ ಅಕ್ಕ, ತಮ್ಮ, ಅಣ್ಣ, ತಂಗಿಯಂತೆ ಸಹೋದರತ್ವದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದರು. ಭಾರತ ಮಾತೆಯ ಮಕ್ಕಳಾಗಿ ಸಂಸ್ಕಾರವಂತರಾಗಬೇಕು. ಸಂಸ್ಕಾರ ನೀಡುವ ಸಮವಸ್ತ್ರ ಧರಿಸಬೇಕು. ಎಲ್ಲರೂ ಶಾಂತಿ ಸಂಯಮ ಕಾಪಾಡಬೇಕು. ಈಗಾಗಲೇ ಅಶಾಂತಿಗೆ ಆಸ್ಪದ ಕೊಡದ ರೀತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರ ಕಂಪೆನಿಯನ್ನು ಕರೆಸಲಾಗಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಒಂದು ವೇಳೆ ಯಾರಾದರೂ ಧಕ್ಕೆ ತಂದರೆ ಆಗತ್ಯ ಕ್ರಮಹಿಸುತ್ತೇವೆ ಎಂದು ಎಚ್ಚರಿಸಿದರು. ಕೋವಿಡ್ನಿಂದಾಗಿ ಕಳೆದ 2 ವರ್ಷಗಳಿಂದ ಸರಿಯಾದ ದೊರೆತಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹೆಚ್ಚು ಗಮನ ಹರಿಸಬೇಕು ಎಂದರು.