ಬೆಂಗಳೂರು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಆಯೋಜಿಸಿದ ಗ್ಲೋಬಲ್ ವೆಲ್ ನೆಸ್ ಮೀಟ್ ನಲ್ಲಿ ಸಾವಯವ ಸಿಗರೇಟ್ ನತ್ತ ಜನರು ಆಕರ್ಷಿತರಾಗಿದ್ದಾರೆ.
ಕಳೆದ ಮೂರು ದಿನಗಳ ಕಾಲ ಆಯೋಜಿಸಿದ ಪ್ರದರ್ಶನದಲ್ಲಿ ಸಾವಯವ ಸಿಗರೇಟ್ ಮಳಿಗೆಯತ್ತ ಹೆಚ್ಚಾಗಿ ಹೆಜ್ಜೆ ಹಾಕಿದ್ದಾರೆ. ಕೆಲವರು ಬಿಡಿಯಾಗಿ ಖರೀದಿ ಮಾಡಿದರೆ, ಮತ್ತೆ ಕೆಲವರು ಇಡೀ ಪ್ಯಾಕೇಟ್ ಖರೀದಿಸಿದರು. ಆಯುರ್ವೇದ ವಸ್ತುಗಳ ಬಳಕೆಯಿಂದ ಸಿದ್ಧಪಡಿಸಿರುವ ಸಾವಯವ ಸಿಗರೇಟು ಸೇದಿದರೆ ನಿಕೋಟಿನ್ ಸಿಗರೇಟ್ ಚಟವನ್ನು ಬಿಡಬಹುದಾಗಿದೆ. ಇದರಿಂದ ಆರೋಗ್ಯವು ಕಾಪಾಡಿಕೊಳ್ಳಬಹುದು. ಸಾವಯವ ಸಿಗರೇಟ್ ನಿಂದ ಯಾವುದೇ ರೀತಿಯ ದೇಹಕ್ಕೆ ದುಷ್ಪರಿಣಾಮವಿಲ್ಲ.
ಹಿಮಾಲಯ ಭಾಗದಿಂದ ಆಯುರ್ವೇದ ವಸ್ತುಗಳಾದ ತುಳಸಿ ಎಲೆ, ಗುಲಾಬಿ ಹೂವಿನ ಪಕಳೆಗಳು ಸೇರಿದಂತೆ ಇತರೆ ವಸ್ತುಗಳನ್ನು ತಂದು ಕಂಪನಿಯಲ್ಲಿಯೇ ಸಿಗರೇಟು ತಯಾರಿಸಲಾಗುತ್ತದೆ. ಒಂದು ಸಿಗರೇಟು ನಾಲ್ಕು ತಾಸುಗಳ ಕಾಲ ಸೇದಬಹುದು. ಔಷಧಿ ಗುಣಗಳನ್ನು ಹೊಂದಿರುವ ಸಿಗರೇಟ್ ಒಂದು ರೀತಿಯಲ್ಲಿ ಔಷಧಿಯು ಆಗಿದೆ. ಈ ಸಿಗರೇಟ್ ಸೇವನೆಯಿಂದ ನಿಕೋಟಿನ್ ಸಿಗರೇಟ್ ಚಟದಿಂದ ಮುಕ್ತಿಯಾಗಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಪಿಯುಷ್ ಚಾವ್ಲಾ ತಿಳಿಸಿದರು.
ಒಂದು ಸಾವಯವ ಸಿಗರೇಟಿನ ಬೆಲೆ 25 ರೂ. ಕಳೆದ ಮೂರು ದಿನಗಳ ಪ್ರದರ್ಶನದಲ್ಲಿ ಸಂಸ್ಥೆಯು ಸುಮಾರು 80 ಸಾವಿರ ರೂ.ಗಳಿಗೂ ಹೆಚ್ಚು ವಹಿವಾಟು ನಡೆಸಿದೆ. ಸಾಕಷ್ಟು ಜನರು ಖರೀದಿಸಿದ್ದಾರೆ. ಮಹಿಳೆಯರು ಮತ್ತು ಪುರುಷರು ಸಿಗರೇಟನ್ನು ಖರೀದಿ ಮಾಡಿದ್ದಾರೆ. ಸಾವಯವ ಸಿಗರೇಟು ಸೇದುವುದರಿಂದ ದೇಹದೊಳಗೆ ಥೆರಪಿ ಮಾಡುತ್ತದೆ. ಅಲ್ಲದೇ, ಒತ್ತಡವನ್ನು ಸಹ ನಿವಾರಣೆ ಮಾಡಲಿದೆ ಎಂದರು.