ಬೆಂಗಳೂರು: ಪಡಿತರ ದವಸಧಾನ್ಯಗಳನ್ನು ವಿತರಿಸಲು ಕನಿಷ್ಠ ಮೂರ್ನಾಲ್ಕು ತಿಂಗಳು ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡುವಂತೆ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಸರ್ಕಾರದ ಪ್ರಮುಖರೊಂದಿಗೆ ಚರ್ಚಿಸಿದ್ದು, ಸದ್ಯಕ್ಕೆ ಬಯೋ ಮೆಟ್ರಿಕ್ ಪದ್ಧತಿ ಕೈಬಿಡುವುದಾಗಿ ಹೇಳಿದ್ದರೂ ಇನ್ನೂ ಸರ್ಕಾರಿ ಆದೇಶ ಹೊರಡಿಸಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಕೋವಿಡ್-19 ಪರಿಸ್ಥಿತಿ ಸಂಬಂಧ ಇಂದು ಹಾಸನ, ಚಾಮರಾಜನಗರ ಮತ್ತು ಮಡಿಕೇರಿ ಜಿಲ್ಲೆಗಳ ಜೆಡಿಎಸ್ ಜನಪ್ರತಿನಿಧಿಗಳು ಪ್ರಮುಖರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪಡಿತರ ಚೀಟಿ ಹೊಂದಿರುವವರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಶಾಸಕರು ಗಮನ ಸೆಳೆದಾಗ ಕುಮಾರಸ್ವಾಮಿ ಸರ್ಕಾರಕ್ಕೆ ಈ ಮೇಲಿನ ಆಗ್ರಹ ಮಾಡಿದರು.
ಜೆಡಿಎಸ್ ಪಕ್ಷದ ಪ್ರಮುಖರು, ಕುಮಾರಸ್ವಾಮಿ ಅವರ ಗಮನಕ್ಕೆ ತಂದ ವಿಷಯಗಳು ಈ ಕೆಳಗಿನಂತಿವೆ:
ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಬೆಡ್ ಗಳ ಸಂಖ್ಯೆ ಕೊರತೆಯಿದೆ. ಸರ್ಕಾರ ಹೋಂ ಐಸೋಲೇಶನ್ ಎಂದು ಹೆಚ್ಚಿನ ಗಮನ ಕೇಂದ್ರೀಕರಿಸಿ ಕೋವಿಡ್ ಸೋಂಕು ಹರಡಲು ಅವಕಾಶ ಮಾಡಿಕೊಡುತ್ತಿದೆ. ಹಳ್ಳಿಗಳಲ್ಲಿ ಪ್ರತ್ಯೇಕ ರೂಮು ಮತ್ತು ಶೌಚಾಲಯಗಳ ಕೊರತೆ ಇದೆ.
ಐಸಿಯು ಬೆಡ್ ಗಳ ಕೊರತೆ, ಆಕ್ಸಿಜನ್ ಸಮಸ್ಯೆ ಇದೆ. ಪರಿಸ್ಥಿತಿ ಸ್ವಲ್ಪ ವಿಕೋಪಕ್ಕೆ ಹೋದರೆ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತದೆ. ಸರ್ಕಾರ ಈಗಲೇ ಎಚ್ಚೆತ್ತು ಕೊಳ್ಳುವುದು ತುರ್ತು ಅಗತ್ಯ.
ಐಸಿಯುನಲ್ಲಿ ಒಬ್ಬರು ಸತ್ತರೆ ಮತ್ತೊಬ್ಬರಿಗೆ ಜಾಗ ಎನ್ನುವಂತಹ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ ಎಂಬ ಮಾಹಿತಿಯನ್ನು ನೀಡಲಾಯಿತು.
ಸತತ ಎರಡು ವರ್ಷಗಳಿಂದ ಬೆಳೆನಷ್ಟ ಮತ್ತು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಸಾಲ ಸಿಗುತ್ತಿಲ್ಲ. ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೋಂಕು ಮತ್ತು ಕಂಗಾಲಾಗಿರುವ ರೈತ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನ ಮೌನ ಆವರಿಸಿದೆ ಎಂಬ ಮಾಹಿತಿ ಆಲಿಸಿದ ಕುಮಾರಸ್ವಾಮಿಯವರು ಈ ಸಂಬಂಧ ಸರ್ಕಾರದೊಂದಿಗೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಪಕ್ಷದ ಜನಪ್ರತಿನಿಧಿಗಳು ಮತ್ತು ನಾಯಕರಿಗೆ ಧೈರ್ಯ ತುಂಬಿದರು.