ಬೆಂಗಳೂರು,ಏ.19 : ಸಚಿವ ಸಂಪುಟ ವಿಸ್ತರಣೆ, ವರಿಷ್ಠರು ಒಪ್ಪಿಗೆ ಕೊಟ್ಟಾಗ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ನಾನು ರಾಜ್ಯದ ಅಭಿವೃದ್ಧಿ ಕಡೆ ಹೆಚ್ಚು ಗಮನಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ವರಿಷ್ಠರು ಕರೆದಾಗ ದೆಹಲಿಗೆ ಹೋಗಿ ಮಾತುಕತೆ ನಡೆಸುತ್ತೇನೆ. ಅವರು ಯಾವ ದಿನಾಂಕದಂದು ಬರಬೇಕು ಎಂಬುದರ ಬಗ್ಗೆ ನನಗೆ ಸೂಚನೆ ಕೊಟ್ಟಿಲ್ಲ. ಹೋಗುವಾಗ ಮಾಧ್ಯಮಗಳಿಗೆ ಖಂಡಿತವಾಗಿಯೂ ಮಾಹಿತಿ ನೀಡಿಯೇ ಹೋಗುತ್ತದೆ ಎಂದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗಿಂತ ಹೆಚ್ಚಾಗಿ ಮೊದಲು ನನಗೆ ರಾಜ್ಯದ ಅಭಿವೃದ್ಧಿ ಕಡೆ ಹೆಚ್ಚು ಗಮನ ನೀಡಬೇಕು. ಕರ್ನಾಟಕವನ್ನು ಎಲ್ಲಾ ಕ್ಷೇತ್ರಗಳಲ್ಲೂ ಮೊದಲ ಸ್ಥಾನಕ್ಕೆ ಕೊಡಯ್ಯಬೇಕು ಎಂಬುದು ನಮ್ಮ ಸರ್ಕಾರದ ಹೆಗ್ಗುರಿಯಾಗಿದೆ. ಇದು ನಮ್ಮ ದೊಡ್ಡ ಸಂಕಲ್ಪವೂ ಹೌದು ಎಂದರು.
ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸಕ್ಕೆ ಹೋಗುತ್ತಿದ್ದೇನೆ. ಇಂದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಇದೆ. ಶೃಂಗೇರಿ ಮತ್ತು ಹರಿಹರಪುರಕ್ಕೆ ಹೋಗುತ್ತಿದ್ದೇನೆ. ಶಿವಮೊಗ್ಗದಲ್ಲಿ ಪಕ್ಷದ ವಿವಿಧ ಸಂಘಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ನಾಳೆ ಕಲಬುರಗಿ ಜಿಲ್ಲೆಯ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಹಲವಾರು ಅಭಿವೃದ್ಧಿ ಜೊತೆಗೆ ಪಕ್ಷಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮವಿದೆ. ಕಾರಜೋಳ ಮತ್ತು ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಇರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಹೈಕಮಾಂಡ್ ಯಾವಾಗ ಹೇಳುತ್ತೋ ಆಗ ದೆಹಲಿಗೆ ಹೋಗುತ್ತೇನೆ. ಆದರೆ ಸಂಪುಟ ವಿಷಯಕ್ಕೂ ಮೊದಲು ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ಕೊಡುತ್ತೇನೆ ಎಂದು ತಿಳಿಸಿದರು.
ಹುಬ್ಬಳ್ಳಿ ಗಲಾಟೆ ವಿಚಾರವಾಗಿ ಈಗಾಗಲೇ ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡುತ್ತೇವೆ. ಕಾನೂನು ಕೈಗೆ ತೆಗೊಂಡರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಅಕ್ಷಮ್ಯ ಅಪರಾಧ. ಅವರ ವಿರುದ್ಧವಾಗಿ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.