ಬೆಂಗಳೂರು: ಲಾಕ್ ಡೌನ್ ಮಾಡಿ ಕೊರೋನಾ ನಿಯಂತ್ರಣ ಮಾಡೋ ಪ್ರಮೇಯವಿಲ್ಲ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಲಾಕ್ ಡೌನ್ ಇಲ್ಲವೇ ಇಲ್ಲ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಕೊರೋನಾ ಸೋಂಕಿನ ಪ್ರಮಾಣ ಫೆಬ್ರವರಿ ತಿಂಗಳಿನಲ್ಲಿ ಪೀಕ್ ಹಂತಕ್ಕೆ ತಲುಪಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಫೀಕ್ ಹಂತಕ್ಕೆ ತಲುಪಿದ ಬಳಿಕ 3-4 ವಾರಗಳಲ್ಲೇ ಕಡಿಮೆ ಆಗಲಿದೆ ಅಂತಾನೂ ತಿಳಿಸಿದ್ದಾರೆ. ಹೀಗಾಗಿ ಜನರು ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದರು.
ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಸಿಎಂ ಜೊತೆಗೆ ಕೊರೋನಾ, ಓಮಿಕ್ರಾನ್ ನಿಯಂತ್ರಣ ಸಂಬಂಧ ಸಭೆ ನಡೆಸಿದರು. ಈ ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಮಾರ್ಗವಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚು ಜನಜಂಗುಳಿ ಸೇರದಂತೆ, ಸಭೆ-ಸಮಾರಂಭಗಳನ್ನು ನಿಯಂತ್ರಿಸುವಂತೆ ಸೂಚಿಸಿದ್ದಾರೆ. ಈಗ ಸದ್ಯಕ್ಕೆ ಶೇ.5-6ರಷ್ಟು ಪ್ರಮಾಣದಲ್ಲಿ ಮಾತ್ರವೇ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಎಲ್ಲಾ ಗಮನಿಸಿದ್ರೇ ಲಾಕ್ ಡೌನ್ ಮೂಲಕ ಕೊರೋನಾ ನಿಯಂತ್ರಣ ಸರಿಯಲ್ಲ ಎನಿಸಿತ್ತದೆ ಎಂದರು.