ಬೆಂಗಳೂರು(ಫೆ.25) : ನಗರದ ಡಿ.ಜೆ.ಹಳ್ಳಿ ಸಮೀಪದ ಶಾಂಪುರ ಮುಖ್ಯರಸ್ತೆಯ ರೈಲ್ವೆ ಹಳಿ ಹತ್ತಿರ ಜನರಿಗೆ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ್ದ ಕುಖ್ಯಾತ ರೌಡಿ ಹಾಗೂ ಆತನ ಸಹಚರರನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಯಲಹಂಕ ಠಾಣೆ ರೌಡಿಶೀಟರ್ ವಾಸಿಂ ಅಲಿಯಾಸ್ ಕುಳ್ಳ ವಾಸಿಂ, ಆತನ ಸಹಚರರಾದ ಯಾಸಿನ್ ನಗರದ ನಜೀಮ್ ಪಾಷ ಹಾಗೂ ದೆಹಲಿ ಮೂಲದ ಮೋಹಿನ್ ಖಾನ್ ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ಶಾಂಪುರ ಮುಖ್ಯರಸ್ತೆಯ ರೈಲ್ವೆ ಹಳಿ ಸಮೀಪ ತನ್ನ ಸಹಚರರ ಜತೆ ನಾಗರಿಕರಿಗೆ ಬೆದರಿಸಿ ಹಣ ಸುಲಿಗೆಗೆ ವಸೀಂ ಸಜ್ಜಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
2014ರಿಂದ ರೌಡಿ ಚಟುವಟಿಕೆಯಲ್ಲಿ ವಾಸಿಂ ತೊಡಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಚರಿತ್ರೆ ಹಿನ್ನೆಲೆಯಲ್ಲಿ ಯಲಹಂಕ ಠಾಣೆಯಲ್ಲಿ ಆತನ ಮೇಲೆ ರೌಡಿ ಪಟ್ಟಿ ತೆರೆಯಲಾಗಿತ್ತು. ಇತ್ತೀಚಿಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಾಸಿಂ ಸಕ್ರಿಯವಾಗಿದ್ದ. ಭೂ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸಿ ಜನರಿಗೆ ಬೆದರಿಕೆ ಹಾಕಿ ಭೂ ಅತಿಕ್ರಮಣ ಮಾಡುತ್ತಿದ್ದ ಬಗ್ಗೆ ಸಹ ದೂರುಗಳಿವೆ. ಇನ್ನುಳಿದ ಆತನ ಸಹಚರ ನಜೀಮ್ ವಿರುದ್ಧ ಕೂಡಾ ಕೊಲೆ ಪ್ರಕರಣ ಇದ್ದು, ವಾಸಿಂಗೆ ದೆಹಲಿ ಮೂಲದ ಮೋಹಿನ್ ಕಾರು ಚಾಲಕನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.