ಬೆಂಗಳೂರು: ರಾಜ್ಯ ಹೈಕೋರ್ಟ್ಗೆ ಏ.24ರಿಂದ ಮೇ 21ರವರೆಗೆ ಬೇಸಿಗೆ ರಜೆ ಇರಲಿದೆ. ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರ್ಗಿ ಪೀಠಗಳಿಗೆ ಈ ಬೇಸಿಗೆ ರಜೆ ಅನ್ವಯವಾಗಲಿದೆ.
ಈ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ವಿವಿಧ ದಿನಾಂಕಗಳಂದು ಏಳು ದಿನ ರಜಾ ಕಾಲದ ನ್ಯಾಯಪೀಠಗಳು ಕಾರ್ಯನಿರ್ವಹಣೆ ಮಾಡಲಿದೆ. ಏಪ್ರಿಲ್ 26, 28, ಮೇ 5, 10, 12, 17 ಮತ್ತು 19 ರಂದು ರಜಾ ಕಾಲದ ಪೀಠಗಳು ಕಾರ್ಯನಿರ್ವಹಿಸಲಿವೆ.
ಬೇಸಿಗೆ ರಜೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಕೆ.ಎಸ್. ಭರತ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
ರಜಾ ಕಾಲದ ನ್ಯಾಯಪೀಠಗಳು ಬೆಂಗಳೂರು ಪ್ರಧಾನ ಪೀಠದಲ್ಲಿ ಕಾರ್ಯ ನಿರ್ವಹಿಸಲಿವೆ. ಧಾರವಾಡ ಹಾಗೂ ಕಲಬುರಗಿ ಪೀಠಗಳಲ್ಲಿ ಭೌತಿಕ ವಿಚಾರಣೆ ಇರುವುದಿಲ್ಲ. ಬದಲಿಗೆ ಈ ಪೀಠಗಳಲ್ಲಿ ದಾಖಲಾಗುವ ತುರ್ತು ಪ್ರಕರಣಗಳು ಬೆಂಗಳೂರಿನ ಪ್ರಧಾನ ಪೀಠದಲ್ಲಿ ಆನ್ಲೈನ್ ಮೂಲಕ ವಿಚಾರಣೆ ನಡೆಯಲಿವೆ.
ಹಾಗಿದ್ದೂ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಪ್ರಕರಣ ದಾಖಲಿಸಲು ವಾರಪೂರ್ತಿ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10 ರಿಂದ 12ರ ನಡುವೆ ನೇರವಾಗಿ ಅಥವಾ ಇ-ಫೈಲಿಂಗ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಕೀಲರಿಗೆ ಸೂಚನೆ:
ರಜಾ ಕಾಲದ ಪೀಠಗಳಲ್ಲಿ ಪ್ರಕರಣದ ವಿಚಾರಣೆ ಕೋರಿ ಮನವಿ ಸಲ್ಲಿಸುವ ವಕೀಲರು ತುರ್ತು ವಿಚಾರಣೆಯ ಕುರಿತು ಉಲ್ಲೇಖಿಸಬೇಕು. ಇಲ್ಲದಿದ್ದರೆ ಅಂತಹ ಅರ್ಜಿಗಳನ್ನು ರಜಾ ಕಾಲದ ವಿಶೇಷ ಪೀಠಗಳ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುವುದಿಲ್ಲ.
ಇನ್ನು ರಜಾ ಕಾಲದ ಪೀಠಗಳಲ್ಲಿ ತುರ್ತು ಅಗತ್ಯವಿರುವ ತಡೆಯಾಜ್ಞೆ ಕೋರಿಕೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ತಡೆಯಾಜ್ಞೆ ಮನವಿಗಳ ಹೊರತಾಗಿ ಸಿವಿಲ್ ಸ್ವರೂಪದ ಪ್ರಕರಣಗಳ ವಿಚಾರಣೆ ಪರಿಗಣಿಸುವುದಿಲ್ಲ. ಅದೇ ರೀತಿ ಕ್ರಿಮಿನಲ್ ಪ್ರಕರಣಗಳಲ್ಲಿಯೂ ತುರ್ತು ಆದೇಶಗಳ, ತಡೆಯಾಜ್ಞೆಗಳ ಕೋರಿಕೆಯನ್ನಷ್ಟೇ ಪರಿಗಣಿಸಲಾಗುತ್ತದೆ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.