ಬೆಂಗಳೂರು : ಪತ್ನಿಯೇ ತನ್ನ ಪತಿ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಡಿಶಾ ಮೂಲದ ಮಹಿಳೆ ತನ್ನ ಗಂಡನ ವಿರುದ್ಧ ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಗಂಡ, ಹೆಂಡತಿ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಇದೀಗ ಜಗಳ ವಿಪರೀತಕ್ಕೆ ತಿರುಗಿ ಗಂಡನ ವಿರುದ್ಧವೇ ಹೆಂಡತಿ ದೂರು ದಾಖಲಿಸಿದ್ದಾಳೆ. ಈ ಕೇಸ್ನ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಮಹತ್ವದ ಆದೇಶ ನೀಡಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಒಡಿಶಾ ಮೂಲದ ದಂಪತಿಯ ಕುಟುಂಬದಲ್ಲಿ ವೈಮನಸ್ಸು ಏರ್ಪಟ್ಟಿದೆ. ಗಂಡ ಹೆಂಡತಿ ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈಗ ಹೆಂಡತಿ, ತನ್ನ ಗಂಡನ ವಿರುದ್ಧವೇ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಹೀಗಾಗಿ ಹೆಂಡತಿ ಮಾಡಿದ ಕೆಲಸದಿಂದಾಗಿ ಗಂಡ ಪೇಚಿಗೆ ಸಿಲುಕಿದ್ದಾನೆ.
ಒಡಿಶಾ ಮೂಲದ ಹೃಷಿಕೇಶ್ ಸಾಹೂ ಮತ್ತವರ ಪತ್ನಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತಿ ವಿರುದ್ಧ ಪತ್ನಿ ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಹಾಗೂ ಅತ್ಯಾಚಾರದ ಆರೋಪ ಮಾಡಿದ್ದರು. ಅಲ್ಲದೆ, ಪತಿಯು ತನ್ನನ್ನು ಲೈಂಗಿಕ ಗುಲಾಮಳಂತೆ ನಡೆಸಿಕೊಂಡಿದ್ದಲ್ಲದೆ, ಅಪ್ರಾಪ್ತ ಮಗಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದರು.
ಇನ್ನೊಂದೆಡೆ ತಮ್ಮ ಮೇಲಿನ ಆರೋಪದ ಕುರಿತಾಗಿ ಅರ್ಜಿಯನ್ನು ರದ್ದುಪಡಿಸುವಂತೆ ಪತಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾನೆ. ಆದರೆ ಪತಿಯ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ ಕಾರಣಕ್ಕಾಗಿ ಕೇಸ್ ದಾಖಲಿಸಲಾಗಿತ್ತು.
ಈ ಕುರಿತಂತೆ ವಿಚಾರಣೆ ನಡೆಸಿರುವ ನ್ಯಾಯಾಲಯ ಅತ್ಯಾಚಾರ ಆರೋಪವನ್ನು ಕೈಬಿಡಲು ನಿರಾಕರಿಸಿದೆ. ಪತಿಗೆ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಎಂದು ವಾದವನ್ನೂ ಮಂಡಿಸಲಾಗಿತ್ತು. ಆದರೆ, ಪತಿಯ ಅರ್ಜಿಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ನೇರವಾಗಿ ವಜಾ ಮಾಡಿದೆ.
ಮದುವೆ ಎಂಬುದು ಪತ್ನಿಯ ಮೇಲೆ ಪೈಶಾಚಿಕ ಕೃತ್ಯ ನಡೆಸಲು ನೀಡುವ ಪರವಾನಗಿ ಅಲ್ಲ ಅಂತ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತ್ನಿ ತನ್ನ ‘ಲೈಂಗಿಕ ದಾಸಿ’ ಎಂಬ ಭಾವನೆಯಿಂದ ಲೈಂಗಿಕ ದೌರ್ಜನ್ಯ ಎಸಗುವ ಪತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿಹೊರಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗುವುದು ಅತ್ಯಾಚಾರ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗೆ ನೀಡುವ ವಿನಾಯಿತಿ ರದ್ದುಪಡಿಸುವ ಬಗ್ಗೆ ಶಾಸಕಾಂಗ ಯೋಚಿಸುವುದು ಸೂಕ್ತ ಎಂದು ಹೈಕೋರ್ಟ್ ಸಲಹೆ ನೀಡಿದೆ.