ಬೆಂಗಳೂರು: ಹುಲಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯಗಳಲ್ಲಿ ವನ್ಯಜೀವಿಗಳ ಸಫಾರಿಗೆ ದರವನ್ನು ಅರಣ್ಯ ಇಲಾಖೆ ಏಕಾಏಕಿ ಹೆಚ್ಚಳ ಮಾಡಿದೆ.
ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದ್ದು,ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್, ಸಂದೇಶ, ಫೋಟೋಗಳು ಮತ್ತು ಜೋಕ್ಸ್ ಗಳು ಹರಿದಾಡುತ್ತಿವೆ. ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಕಬಿನಿ ಸಾಮಾನ್ಯವಾಗಿ ಶ್ರೀಮಂತ ಮತ್ತು ಸಮಾಜದ ಮೇಲ್ವರ್ಗದವರು ಸಫಾರಿ ನಡೆಸುವ ಜಾಗವಾಗಿದೆ. ಆದರೆ ಇಲ್ಲಿ ಸಫಾರಿಗೆ ದರ ಹೆಚ್ಚಿಸಿದ್ದು ಮೇಲ್ವರ್ಗದವರನ್ನು ಸಹ ಚಿಂತೆಗೀಡು ಮಾಡಿದೆ. ಕಬಿನಿ ಪ್ರವಾಸ ದುಬಾರಿ ಎಂದು ಜನರು ಭಾವಿಸುತ್ತಿದ್ದಾರೆ.
ನಾಲ್ಕು ವರ್ಷಗಳಿಗೊಮ್ಮೆ ಸಫಾರಿ ದರ ಪರಿಷ್ಕರಿಸಲಾಗುತ್ತದೆ. ಕಳೆದ ಬಾರಿ 2017-18ರಲ್ಲಿ ಪರಿಷ್ಕರಿಸಲಾಗಿತ್ತು. ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಒಂದೇ ರೀತಿಯ ದರವನ್ನು ಹೆಚ್ಚಿಸಲಾಗಿತ್ತು. ಆದರೆ ಈ ಬಾರಿ ಪ್ರತಿ ಅರಣ್ಯ ಪ್ರದೇಶದಲ್ಲಿ ದರ ವಿಭಿನ್ನವಾಗಿದೆ. ಅನಗತ್ಯವಾಗಿ ಫೋಟೋಗ್ರಫಿ, ವಿಡಿಯೊ ಮಾಡುವವರನ್ನು, ಜನದಟ್ಟಣೆಯನ್ನು ತಡೆಯುತ್ತದೆ ಎಂದು ಅರಣ್ಯಾಧಿಕಾರಿಗಳು ದರ ಹೆಚ್ಚಳವನ್ನು ಸಮರ್ಥಿಸಿಕೊಳ್ಳುತ್ತಾರೆ.
ದರ ಹೆಚ್ಚಳ ಸಾಮಾನ್ಯ ಜನರಿಗೆ ಅಸಮಾಧಾನ ತಂದಿದ್ದು, ಮಕ್ಕಳಿಗೆ ಇನ್ನೂ ಮೊಬೈಲ್ ಮೂಲಕವೇ ಪ್ರಾಣಿಗಳನ್ನು ತೋರಿಸಬೇಕಾದ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.