ಬೆಂಗಳೂರು: ಕೋವಿಡ್ -19 ಮೂರನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾಡದಿರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಹಾಗೂ ಇಲಾಖಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಶುಕ್ರವಾರ ಮತ್ತೊಂದು ಸುತ್ತಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಆ ಸಭೆಯ ನಂತರ ಕಠಿಣ ನಿಯಮದ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.
ಇಂದಿನ ಸಭೆಯಲ್ಲಿ ಲಾಕ್ ಡೌನ್ ಬೇಡವೆಂದು ತೀರ್ಮಾನಿಸಲಾಗಿದೆ. ಜ. 25ರ ವೇಳೆಗೆ ಕೋವಿಡ್ ಸೋಂಕು ಪೀಕ್ (ಉಚ್ಛ್ರಾಯ ಸ್ಥಿತಿಗೆ) ಹಂತಕ್ಕೆ ಹೋಗುತ್ತದೆ. ಬಳಿಕ ಯಾವ ನಿಯಮ ಮಾಡಬೇಕು ಎಂದು ತೀರ್ಮಾನಿಸಲಾಗುವುದು. ಅಲ್ಲಿಯವರೆಗೆ ಯಥಾ ಸ್ಥಿತಿ ಮುಂದುವರೆಯಲಿದೆ ಎಂದು ಸಚಿವ ಆರ್. ಅಶೋಕ್ ವಿವರಿಸಿದ್ದಾರೆ.