ಬೆಂಗಳೂರು : ‘ಯಾರು ಎರಡು ಡೋಸ್ ಲಸಿಕೆ ಪಡೆದಿಲ್ಲವೋ ಅಂತಹವರಿಗೆ ಒಮಿಕ್ರಾನ್ ಆತಂಕ ಹೆಚ್ಚು’ ಎಂದು ಬುಧವಾರ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 15 ರಿಂದ 18 ವರ್ಷದೊಳಗಿನ 3,50,000 ಮಕ್ಕಳಿಗೆ ಈಗಾಗಲೇ ಲಸಿಕೆ ನೀಡಿದ್ದೇವೆ. ದೇಶದಲ್ಲಿ ನಾವು 3 ನೇ ಸ್ಥಾನದಲ್ಲಿದ್ದೇವೆ. ಈಗಾಗಲೇ 25 ಶೇಕಡಾ ಲಸಿಕಾಕರಣ ಆಗಿದೆ, ಅಂದರೆ 4 ಮಕ್ಕಳಲ್ಲಿಲ್ಲಿ ಒಬ್ಬರಿಗೆ ಲಸಿಕೆ ಆಗಿದೆ. ನಾನು ಹೇಳಿದ ಹಾಗೆ 10 ರಿಂದ 15 ದಿನಗಳಲ್ಲಿ ಸಂಪೂರ್ಣ ಲಸಿಕಾಕರಣ ಆಗುತ್ತದೆ ಎಂದಿದ್ದೆ. ಅದೇ ದಾರಿಯಲ್ಲಿ ಸಾಗಿದೆ. 28 ದಿನ ಆದ ಮೇಲೆ ಮಕ್ಕಳಿಗೆ 2 ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನೇ ನೀಡಲಾಗುತ್ತದೆ ಎಂದರು.
ಎಚ್ಚರಿಕೆ ಅಗತ್ಯ
ವಿಶ್ವದಲ್ಲಿ ಗಮನಿಸಿದ ಹಾಗೆ 4 ರಿಂದ 6 ವಾರಗಳು ಬಹಳ ಎಚ್ಚರಿಕೆ ಅಗತ್ಯ. ಇದು ವೇಗವಾಗಿ ಹರಡಿ, ಬೇಗವಾಗಿ ಕಡಿಮೆಯಾಗುತ್ತದೆ. ದೀರ್ಘ ಅಲೆ ಇರುವುದಿಲ್ಲ. ಕನಿಷ್ಠ 4 ರಿಂದ 6 ವಾರಗಳ ಕಾಲ ಬಹಳ ಎಚ್ಚರಿಕೆಯಿಂದ ಇದ್ದು ನಿಯಂತ್ರಣ ಮಾಡಲು ಸಹಕಾರ ನೀಡಬೇಕು ಎಂದು ಜನರಿಗೆ ಮನವಿ ಮಾಡಿದರು.
ಗಾಬರಿ ಬೇಡ
ಸೋಂಕು ಬಂದರೂ ಗಾಬರಿ ಬೇಡ, ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ,ಆತಂಕ ಬೇಡ. ಒಮಿಕ್ರಾನ್ ವೈರಾಣು ಸ್ವಭಾವ ಹೇಗಿದೆ ಎಂದರೆ ಮೂಗಿನಿಂದ ಗಂಟಲಿಗೆ ಹೋಗುತ್ತದೆ, ಶ್ವಾಸಕೋಶಕ್ಕೆ ಹೋಗುವುದು ತೀರಾ ಕಡಿಮೆ. ಹಾಗಾಗಿ ಆಕ್ಸಿಜೆನ್, ವೆಂಟಿಲೇಟರ್ ಅಗತ್ಯ ಕಡಿಮೆ, ಐಸಿಯು ನಲ್ಲಿ ದಾಖಲಾದ ಸಂಖ್ಯೆಯೂ ತೀರಾ ಕಡಿಮೆ ಇದೆ ಎಂದರು.
60 ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್
10 ನೇ ತಾರೀಖಿನಿಂದ ಇತರೆ ರೋಗಗಳಿಂದ ಬಳಲುತ್ತಿರುವರಿಗೆ ಮೂರನೇ ಬೂಸ್ಟರ್ ಡೋಸ್ ನೀಡುತ್ತೇವೆ. ಆರೋಗ್ಯ ಕ್ಷೇತ್ರದ ಎಲ್ಲರಿಗೂ, ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಮೂರನೇ ಬೂಸ್ಟರ್ ಡೋಸ್ ನೀಡುತ್ತೇವೆ ಎಂದು ತಿಳಿಸಿದರು.