ಬೆಂಗಳೂರು : ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಬಗ್ಗೆ ಅನಗತ್ಯವಾಗಿ ಭಯದ ವಾತಾವರಣ ನಿರ್ಮಿಸುವ ಕೆಲಸವಾಗುತ್ತಿದೆ. ಮಾಧ್ಯಮಗಳಲ್ಲಿ ಕೇವಲ ಒಮಿಕ್ರಾನ್ ಸುದ್ದಿ ಬರುತ್ತಿದೆ. ಅಂತಹ ಭಯದ ವಾತಾವರಣ ನಮ್ಮಲ್ಲಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಒಮಿಕ್ರಾನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾರೋ ಏರ್ ಪೋರ್ಟ್ ನಿಂದ ಓಡಿ ಹೋದ ಎನ್ನುವಂತಹ ಭಯದ ವಾತಾವರಣ ಸೃಷ್ಟಿಸುವ ಸುದ್ದಿಯಾಗುತ್ತಿದೆ. ಆ ರೀತಿ ವಾತಾವರಣ ರಾಜ್ಯದಲ್ಲಿ ಇಲ್ಲ ಎಂದರು.
ಬೆಂಗಳೂರಿನಲ್ಲಿ ಹಲವು ಉದ್ಯಮಗಳಿವೆ, ಐಟಿ ಕಂಪನಿಗಳಿವೆ. ಈಗಾಗಲೇ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಎಲ್ಲದಕ್ಕೂ ಎಲ್ಲರೂ ಸರ್ಟಿಫಿಕೆಟ್ ತೋರಿಸಿ ಎಂಟ್ರಿ ಪಡೆಯಬೇಕು ಎಂದರೆ ಹೇಗೆ ? ಇಡೀ ದೇಶಕ್ಕೆ ಇಲ್ಲದ ರೂಲ್ಸ್ ಕರ್ನಾಟಕಕ್ಕೆ ಯಾಕೆ ? ದೇಶಕ್ಕೆಲ್ಲ ಒಂದೇ ರೀತಿಯ ನಿಯಮ ಇರಬೇಕು ಎಂದರು.
ಮೊದಲ ಹಾಗೂ ಎರಡನೇ ಅಲೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಇನ್ನೂ ಯಾವುದೇ ಪರಿಹಾರ ನೀಡಿಲ್ಲ. ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.