ಬೆಂಗಳೂರು, ಡಿ.13 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರದಿಂದ ಎರಡು ದಿನಗಳ ವಾರಣಾಸಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಬೆಳಗಾವಿ ಆಧಿವೇಶನದ ಆರಂಭದ ಬಳಿಕ ಬೆಳಗಾವಿಯಿಂದಲೇ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳಸಲಿದ್ದಾರೆ.
ಬಿಜೆಪಿ ಆಡಳಿತವರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮೂರು ದಿನಗಳ ಧಾರ್ಮಿಕ ಪ್ರವಾಸ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದು ಮತ್ತು ಡಿ.14ರಂದು ವಿಧಾನ ಪರಿಷತ್ತಿನ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ಕಾರಣದಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.14ರಂದು ವಾಪಸ್ಸಾಗಲಿದ್ದಾರೆ.
ಬೆಳಗ್ಗೆ ಅಧಿವೇಶನದ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 2.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ 4.45ಕ್ಕೆ ವಾರಣಾಸಿ ತಲುಪುತ್ತಾರೆ.
ಗಂಗಾರತಿಯಲ್ಲಿ ಭಾಗಿ:
ಕಾಶಿಯಲ್ಲಿ ವಿಶ್ವನಾಥನ ಗತವೈಭವ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಮೂರು ದಿನಗಳ ಕಾಲ ವಾರಣಾಸಿಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಪ್ರಧಾನಿ ಕನಸಿನ ಕಾಶಿ ವಿಶ್ವನಾಥ ಕಾರಿಡಾರ್ ಪ್ರಾಜೆಕ್ಟ್ ಸೋಮವಾರ ಸಂಜೆ ಉದ್ಘಾಟನೆಯಾಗಲಿದೆ.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಕೈಗೊಂಡ ನಿರ್ಣಯವು ಕಾಶಿ ವಿಶ್ವನಾಥ ಧಾಮದ ರೂಪ ಪಡೆದಿದ್ದು, ಅದು ಡಿಸೆಂಬರ್ 13 ರಂದು ಉದ್ಘಾಟನೆಗೊಳ್ಳಲಿದೆ. ಉತ್ತರ ಪ್ರದೇಶದ ನವೀಕೃತ ಧಾರ್ಮಿಕ ನಗರ ಕಾಶಿಯಲ್ಲಿ ‘ಭವ್ಯ ಕಾಶಿ- ದಿವ್ಯ ಕಾಶಿ’ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಲಿಸಲಾಗಿದೆ. ಈ ಸಂದರ್ಭದಲ್ಲಿ ನಡೆಯುವ ಭವ್ಯ ಗಂಗಾರತಿ ಕಾರ್ಯಕ್ರಮದಲ್ಲಿಯೂ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತ ತೆರಳಿದ್ದಾರೆ ಎಂದು ಹೇಳಲಾಗುತ್ತದೆ.
ಉತ್ತಮ ಆಡಳಿತ ಕುರಿತು ಸಮ್ಮೇಳನ:
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆ ಡಿ.14ರಂದು ವಾರಣಾಸಿಯಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಉತ್ತಮ ಆಡಳಿತ ಸಂಬಂಧ ಚರ್ಚಿಸಲು ‘ಸುಶಾಸನ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 3.30ಕ್ಕೆ ವಾರಣಾಸಿಯಿಂದ ವಿಶೇಷ ವಿಮಾನದಲ್ಲಿ ಹೊರಟು ಸಂಜೆ 5.45ಕ್ಕೆ ನೇರವಾಗಿ ಬೆಳಗಾವಿ ತಲುಪಲಿದ್ದಾರೆ.