ಬೆಂಗಳೂರು : ಮೂರು ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರಿಗೆ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧವಿತ್ತು. ಕೊಡಗಿನ ಜೊತೆಗೆ ವಿಶೇಷವಾದ ಸಂಬಂಧವಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಹಲವಾರು ಬಾರಿ ಬಂದಿದ್ದಾರೆ. ಇಲ್ಲಿನ ಅನೇಕ ಸ್ಥಾಪನೆಗಳಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಈಗಿರುವ ಅಧಿಕಾರಿಗಳು ಮತ್ತು ನಿವೃತ್ತ ಅಧಿಕಾರಿಗಳು ಅವರೊಂದಿಗಿರುವ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ ಎಂದರು.
ರಾವತ್ ಅವರಿಗೆ ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಮೇಲೆ ಅಪಾರವಾದಂತಹ ಭಕ್ತಿ ಶ್ರದ್ಧೆ ಇತ್ತು. ಇಬ್ಬರೂ ಮಹನೀಯರು ಕರ್ನಾಟಕದವರು, ಕೊಡಗಿನವರು ಮತ್ತು ಒಂದೇ ಊರಿನವರು ಎಂಬ ಬಗ್ಗೆ ಬಹಳಷ್ಟು ಅಭಿಮಾನವಿತ್ತು. ಹಲವಾರು ಭಾಷಣಗಳಲ್ಲಿ ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನು ನೆನಪು ಮಾಡಿ, ಅವರ ಶೌರ್ಯವನ್ನು ಉಲ್ಲೇಖ ಮಾಡುತ್ತಿದ್ದರು. ಇಲ್ಲಿನ ಜನರು, ಸೈನಿಕರ ಬಗ್ಗೆ ಬಹಳ ಗೌರವವೂ ಇತ್ತು ಎಂದು ಸಿಎಂ ತಿಳಿಸಿದರು.
ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಬಿಪಿನ್ ರಾವತ್ ಅವರ ದುರ್ಮಣದಿಂದ ಇಡೀ ದೇಶವೇ ದಿಗ್ಭ್ರಾಂತಗೊಂಡಿದೆ. ಇದು ನಂಬುದಕ್ಕೆ ಸಾಧ್ಯವಿಲ್ಲದಂತಹ ದುರ್ಘಟನೆ. ಯಾಕಾಯಿತು, ಹೇಗಾಯಿತು ಎಂಬುದರ ತನಿಖೆಗೆ ಇಂಡಿಯನ್ ಏರ್ ಫೋರ್ಸ್ ಆದೇಶಿಸಿದೆ. ರಾವತ್ ಅವರು ಗ್ರೇಟ್ ಲೀಡರ್, ಮುಂಚೂಣಿಯಲ್ಲಿ ನಿಂತು ಸೈನ್ಯವನ್ನು ಮುನ್ನಡೆಸಿದ್ದರು. ಯುದ್ಧ ಭೂಮಿಯಲ್ಲಿ ಹೊಸ ಹೊಸ ವಿಧಾನಗಳನ್ನು ಕಂಡುಕೊಂಡು, ಅನುಷ್ಠಾನ ಮಾಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತ ಶಸಾಸ್ತ್ರ, ಸಲಕರಣೆಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗಬೇಕೆಂಬ ಹಂಬಲವಿದ್ದ ರಾವತ್ ಅವರು, ಸ್ಥಳೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆಯನ್ನು ಆರಂಭಿಸಿದ್ದರು. ಡಿಆರ್ಡಿಒ ಹಾಗೂ ಅನೇಕ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಅವರ ಪ್ರೇರಣೆಯೂ ಇದೆ. ಹೊಸ ಆವಿಷ್ಕಾರ, ಉಪಕರಣಗಳನ್ನು ತಯಾರು ಮಾಡಿ ಸೇನೆಗಳಿಗೆ ಸರಬರಾಜು ಮಾಡುವುದಷ್ಟೇ ಅಲ್ಲ, ಖಾಸಗಿ ವಲಯದಲ್ಲಿಯೂ ಉತ್ಪಾದನೆ ಮಾಡಲು ಜ್ಞಾನವನ್ನು ವರ್ಗಾಯಿಸಿ ಬಹಳ ಪ್ರೋತ್ಸಾಹ ನೀಡಿದ್ದರು ಎಂದು ಬಣ್ಣಿಸಿದರು.
ರಾಷ್ಟ್ರದ ಸುರಕ್ಷತೆಯ ಬಗ್ಗೆ ಅವರದ್ದೇ ಆದ ದಿಟ್ಟ ನಿಲುವು, ಹಿಂದೆಂದೂ ತೆಗೆದುಕೊಳ್ಳದಿರುವಂತಹ ಹಲವಾರು ನಿರ್ಧಾರಗಳನ್ನು ಅವರು ತೆಗೆದುಕೊಂಡಿದ್ದರು. ಚೀನಾ ಗಡಿ ಪ್ರದೇಶದಲ್ಲಿ ಭಾರತವನ್ನು ಗಟ್ಟಿಯಾಗಿ ನಿಲ್ಲಿಸಿ, ಚೀನಾವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಗಿದ್ದರು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅವರ ಸೇವೆಯನ್ನು ಗುರುತಿಸಿ, ಅವರಿಗೆ ಮೂರು ಸೇನೆಗಳ ನಾಯಕತ್ವವನ್ನು ಕೊಟ್ಟಿರುವುದು ಗಮನಾರ್ಹ. ಅಂತಹ ಮಹಾನ್ ವ್ಯಕ್ತಿಯನ್ನು ಕೇವಲ ರಕ್ಷಣಾ ಸಚಿವಾಲಯ ಮಾತ್ರವಲ್ಲ, ಇದೇ ದೇಶವೇ ಕಳೆದುಕೊಂಡಿದೆ. ಒಬ್ಬ ಪ್ರೇರಣಾದಾಯಕ, ಆದರ್ಶ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.
ರಾವತ್ ಅವರ ಬದುಕಿನ ಚರಿತ್ರೆಯನ್ನು, ತ್ಯಾಗ ಬಲಿದಾನವನ್ನು ದೇಶ ತುಂಬಾ ತಿಳಿಸಿ, ಮುಂದಿನ ಪೀಳಿಗೆ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆಯುವುದಕ್ಕೆ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರು ಕೊಟ್ಟಿರುವ ಕಾರ್ಯಕ್ರಮಗಳನ್ನು ಮುಂದುವರಿಸಿ, ಅವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.