ಬೆಂಗಳೂರು (ಏ. 21) : ಕಾಂಗ್ರೆಸ್ಗೆ ಠಕ್ಕರ್ ಕೊಡಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಈ ತಿಂಗಳಾಂತ್ಯಕ್ಕೆ ಪ್ರಚಾರ ಸಮಿತಿ ರಚಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಒಲವು ತೋರುತ್ತಿರುವ ಪಕ್ಷದ ವರಿಷ್ಠರು ಕಾರ್ಯವೈಖರಿ ಮತ್ತು ಜಾತಿ-ಪ್ರಾದೇಶಿಕ ಸಮೀಕರಣದ ಆಧಾರದ ಮೇಲೆ ಹಲವರನ್ನು ಸಂಪುಟದಿಂದ ಕೈಬಿಡುವ ಬಗ್ಗೆಯೂ ಆಲೋಚನೆ ಮಾಡುತ್ತಿದ್ದಾರೆ.
ಒಂದು ವೇಳೆ ಇದು ಅನುಷ್ಠಾನಗೊಂಡಲ್ಲಿ ಸಂಪುಟದಿಂದ ಹೊರಬರುವವರಿಗೆ ಪಕ್ಷದ ಪ್ರಚಾರ ಸಮಿತಿಯಲ್ಲಿ ಸ್ಥಾನ ಕಲ್ಪಿಸುವ ಮೂಲಕ ಗೌರವದಿಂದ ನಡೆಸಿಕೊಂಡಂತೆಯೂ ಆಗುತ್ತದೆ ಎಂಬ ಲೆಕ್ಕಾಚಾರವೂ ಇದೆ.
ಈವರೆಗೆ ಸಂಪುಟದಿಂದ ಎಷ್ಟುಸಚಿವರಿಗೆ ಗೇಟ್ ಪಾಸ್ ಸಿಗಲಿದೆ ಎಂಬುದರ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ, ಪಕ್ಷದಲ್ಲಿ ವದಂತಿ ಮಾತ್ರ ದಟ್ಟವಾಗಿಯೇ ಇದೆ. ಈ ಬಗ್ಗೆ ಇದೇ ತಿಂಗಳ ಅಂತ್ಯದೊಳಗೆ ಪಕ್ಷದ ವರಿಷ್ಠರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಸಂಭವವಿದೆ. ಸಭೆ ನಡೆಸಿದ ಬಳಿಕವೇ ಈ ಕುರಿತು ಸ್ಪಷ್ಟಚಿತ್ರಣ ಹೊರಬೀಳಲಿದೆ.