ಮುಂಬೈ:ಪಾನ್ ಮಸಾಲಾ ಜಾಹಿರಾತಿನಲ್ಲಿ ಕಾಣಿಸಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದ ನಟ ಅಕ್ಷಯ್ ಕುಮಾರ್ ಇದೀಗ ಕ್ಷಮೆಯಾಚಿಸಿದ್ದಾರೆ.ಇದು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಆಗಿದೆ. ಆದರೆ ಅಕ್ಷಯ್ ಕುಮಾರ್ ನಿರ್ಧಾರವನ್ನು ಅಭಿಮಾನಿಗಳು ಸ್ವೀಕರಿಸಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಗಳಾಗಿತ್ತು. ಇದೀಗ ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಬ್ರಾಂಡ್ನ ರಾಯಭಾರಿಯಾಗಿಯೂ ಹಿಂದೆ ಸರಿದಿದ್ದಾರೆ.
ಅದಲ್ಲದೆ ಇನ್ನು ಮುಂದೆ ಇಂತಹ ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರ ನಂತರ ಪಾನ್ ಮಸಾಲಾ ಬ್ರಾಂಡ್ ಜಾಹೀರಾತಿಗೆ ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ಇತ್ತೀಚೆಗೆ ಸೇರಿದ್ದರು.
‘ನನ್ನನ್ನು ಕ್ಷಮಿಸಿ, ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಯು ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಮತ್ತು ಅನುಮೋದಿಸುವುದಿಲ್ಲ. ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ನಾನು ಈ ಜಾಹಿರಾತಿನಿಂದ ಹಿಂದೆ ಸರಿಯುತ್ತೇನೆ. ನಾನು ಸಂಪೂರ್ಣ ಶುಲ್ಕವನ್ನು ಯೋಗ್ಯವಾದ ಕಾರಣಕ್ಕಾಗಿ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ಬ್ರ್ಯಾಂಡ್ ನನ್ನ ಮೇಲೆ ಬದ್ಧವಾಗಿರುವ ಒಪ್ಪಂದದ ಕಾನೂನು ಅವಧಿಯವರೆಗೆ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸಬಹುದು, ಆದರೆ ನನ್ನ ಭವಿಷ್ಯದ ಆಯ್ಕೆಗಳನ್ನು ಮಾಡುವಲ್ಲಿ ನಾನು ಅತ್ಯಂತ ಜಾಗರೂಕರಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ” ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.
ಪಾನ್ ಮಸಾಲಾ ಬ್ರ್ಯಾಂಡ್ನ ಇತ್ತೀಚಿನ ಜಾಹೀರಾತಿನಲ್ಲಿ, ಶಾರುಖ್ ಮತ್ತು ಅಜಯ್ ದೇವಗನ್ ಅವರು ಅಕ್ಷಯ್ ಕುಮಾರ್ ಅವರನ್ನು ‘ವಿಮಲ್ ಯೂನಿವರ್ಸ್’ಗೆ ಸ್ವಾಗತಿಸುತ್ತಿರುವುದನ್ನು ತೋರಿಸಲಾಗಿದೆ. ಇದರಿಂದ ಅಕ್ಷಯ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಮದ್ಯ ಮತ್ತು ತಂಬಾಕು ಉತ್ಪನ್ನಗಳ ಸೇವನೆಯ ವಿರುದ್ಧ ಮತ್ತು ಅದರ ಜಾಹೀರಾತುಗಳಲ್ಲಿ ಭಾಗವಹಿಸುವ ನಟರ ಬಗ್ಗೆ ಮಾತನಾಡಿರುವ ಅವರ ಹಳೆಯ ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ.