ಬೆಂಗಳೂರು : ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ಸಮೀಪ ನಡೆದಿದೆ.
ಹೊಸಕೆರೆಹಳ್ಳಿಯ ಶೋಭಾ ವ್ಯಾಲಿ ಅಪಾರ್ಟ್ಮೆಂಟ್ ನಿವಾಸಿಗಳಾದ ಪ್ರದೀಪ್ ಹಾಗೂ ಆರತಿ ದಂಪತಿ ಒಬ್ಬನೇ ಮಗ ಗಗನ್(11) ಮೃತ ದುರ್ದೈವಿ. ತನ್ನ ತಂದೆ-ತಾಯಿ ಹೊರ ಹೋಗಿದ್ದಾಗ ಗುರುವಾರ ಮಧ್ಯಾಹ್ನ ಅಪಾರ್ಟ್ಮೆಂಟ್ನ 11ನೇ ಮಹಡಿಗೆ ತೆರಳಿದ ಗಗನ್, ಅಲ್ಲಿಂದ 5ನೇ ಮಹಡಿಗೆ ಬಿದ್ದು ಮೃತಪಟ್ಟಿದ್ದಾನೆ. ಕೆಲ ಹೊತ್ತಿನ ಬಳಿಕ ಫ್ಲ್ಯಾಟ್ಗೆ ಮರಳಿದ ಮೃತನ ಪೋಷಕರು, ಮಗನಿಗೆ ಹುಡುಕಾಟ ನಡೆಸಿದಾಗ 5ನೇ ಮಹಡಿಯಲ್ಲಿ ಗಗನ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನೆಲಮಂಗಲ ತಾಲೂಕಿನ ಪ್ರದೀಪ್ ಅವರು, ಹಲವು ವರ್ಷಗಳಿಂದ ಹೊಸಕೆರೆಹಳ್ಳಿ ಸಮೀಪದ ಶೋಭಾ ವ್ಯಾಲಿ ಅಪಾರ್ಟ್ಮೆಂಟ್ನ 11ನೇ ಹಂತದ ಫ್ಲ್ಯಾಟ್ನಲ್ಲಿ ಪತ್ನಿ ಆರತಿ ಹಾಗೂ ಪುತ್ರ ಗಗನ್ ಜತೆ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರು ಉದ್ಯೋಗದಲ್ಲಿದ್ದರೆ, ಪತ್ನಿ ಗೃಹಿಣಿ. ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅವರ ಪುತ್ರ ಗಗನ್ ಓದುತ್ತಿದ್ದ. ಕೊರೋನಾ ಕಾರಣ ಹಿನ್ನಲೆಯಲ್ಲಿ ಶಾಲೆಗೆ ತೆರಳದೆ ಮನೆಯಲ್ಲೇ ಆತ ಆನ್ ಲೈನ್ ಪಾಠ ಕೇಳುತ್ತಿದ್ದ. ತಮ್ಮ ಫ್ಲ್ಯಾಟ್ನಲ್ಲಿ ಗಿಡಗಳನ್ನು ಬೆಳೆಸಲು ನಿರ್ಧರಿಸಿದ್ದ ಪ್ರದೀಪ್ ದಂಪತಿ, ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಹೂ ಕುಂಡಗಳ ಖರೀದಿಗೆ ತೆರಳಿದ್ದರು. ಆ ವೇಳೆ ಫ್ಲ್ಯಾಟ್ನಲ್ಲೇ ಮಗನನ್ನು ಬಿಟ್ಟು ಅವರು ಹೋಗಿದ್ದರು. ಇತ್ತ ತಂದೆ-ತಾಯಿ ಹೊರ ಹೋದ ಬಳಿಕ ಗಗನ್, ಫ್ಲ್ಯಾಟ್ನಿಂದ ಹೊರಬಂದು ಟೆರೇಸ್ಗೆ ಹೋಗಿದ್ದಾನೆ. ಅಲ್ಲಿಂದ ಆತ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.