ಬೆಂಗಳೂರು : ಮತಾಂತರ ನಿಷೇಧ ಕಾನೂನು 2021 ಮಂಡಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಮತ್ತು ಎಲ್ಲ ಬಿಜೆಪಿ ಶಾಸಕರ ವಿರುದ್ಧ ದೂರು ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಆರ್.ಮಾನಯ್ಯ ಅವರು ರಾಯಚೂರು ಜಿಲ್ಲೆಯ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ದೂರುದಾರರು ತಮ್ಮ ದೂರಿನಲ್ಲಿ ಎಲ್ಲಾ ರಾಜ್ಯ ಬಿಜೆಪಿ ಶಾಸಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಆಡಳಿತಾರೂಢ ಬಿಜೆಪಿ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಜನರನ್ನು ಕೀಳಾಗಿ ತೋರಿಸಿದೆ ಎಂದು ದೂರುದಾರರು ಹೇಳಿದ್ದಾರೆ.
ಮತಾಂತರ ವಿರೋಧಿ ಮಸೂದೆಯು ಈ ಸಮುದಾಯಗಳ ಜನರನ್ನು ಅಲೆಮಾರಿಗಳು, ಭಿಕ್ಷುಕರು ಎಂದು ತೋರಿಸಿದೆ ಮತ್ತು ಹಣ, ಬಟ್ಟೆ ಮತ್ತು ದೇಣಿಗೆ ಆಕರ್ಷಣೆಯೊಂದಿಗೆ ಇತರ ಧರ್ಮಗಳಿಗೆ ಮತಾಂತರಗೊಳ್ಳುವವರು ಎಂದು ಚಿತ್ರಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.