ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯದ ಗ್ರಾಮೀಣ ಕ್ರೀಡಾಪಟುಗಳ ಅಭ್ಯುದಯಕ್ಕೆ ಮಾರಕವಾಗಿ ಪರಿಣಮಿಸಿದ್ದು, ಹೀಗಾಗಿ ಬ್ಯಾಡ್ಮಿಂಟ್ ಅಸೋಸಿಯೇಷನ್ ಗೆ ನೀಡಿರುವ ಮಾನ್ಯತೆಯನ್ನು ರದ್ದುಪಡಿಸಬೇಕು. ಸರ್ಕಾರ ಗುತ್ತಿಗೆ ಆಧಾರದ ಮೇಲೆ ನೀಡಿರುವ ಭೂಮಿ, ಮತ್ತಿತರ ಸವಲತ್ತುಗಳನ್ನು ರದ್ದುಪಡಿಸಬೇಕು ಎಂದು ಬಿಜೆಪಿ ಶಾಸಕ ಹಾಗೂ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಬ್ಯಾಡ್ಮಿಂಟನ್ ಅಸೋಷಿಯೇಷನ್ ವಿರುದ್ಧ ಜಿಲ್ಲಾ ಘಟಕಗಳು ತಿರುಗಿ ಬಿದ್ದಿದ್ದು, ಜಿಲ್ಲಾ ಬ್ಯಾಡ್ಮಿಂಟನ್ ಅಸೋಷಿಯೇಷನ್ ಅನ್ನು ಅಸ್ಥಿತ್ವಕ್ಕೆ ತರಲಾಗುತ್ತಿದೆ. ಹೀಗಾಗಿ ಬರುವ ಫೆಬ್ರವರಿಯಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಅಸೋಷಿಯೇಷನ್ ನ ಮಹಾ ಸಭೆಯಲ್ಲಿ ನಮಗೆ ಪ್ರತ್ಯೇಕ ಮಾನ್ಯತೆ ನೀಡುವಂತೆ ಕೋರಲಾಗಿದೆ.ಕರ್ನಾಟಕ ಬ್ಯಾಡ್ಮಿಂಟನ್ ಅಸೋಷಿಯೇಷನ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಆಪ್ ಇಂಡಿಯಾ ಬೈಲಾ ಹಾಗೂ ಕೇಂದ್ರ ಸರ್ಕಾರದ ಕ್ರೀಡಾಭಿವೃದ್ಧಿ ನೀತಿಯ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿದೆ.
22 ಜಿಲ್ಲೆಗಳ ಜಿಲ್ಲಾ ಬ್ಯಾಡ್ಮಿಂಟನ್ ಘಟಕಗಳಿಗೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಪಾದಿಸಿದ್ದಾರೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಷಿಯೇಷನ್ ಗೆ ಇಂದು ಚುನಾವಣೆ ನಡೆದಿದ್ದು,10 ಬ್ಯಾಡ್ಮಿಂಟನ್ ಅಸೋಷಿಯೇಷನ್ ಗಳಿಗೆ ಮುಂದಿನ ವರ್ಷದ ಸದಸ್ಯತ್ವ ಶುಲ್ಕ ನೀಡದ ಕಾರಣ ನಿಯಮ ಬಾಹಿರವಾಗಿ ಮತದಾನದ ಹಕ್ಕು ನಿರಾಕರಿಸಲಾಗಿದೆ. ಜಿಲ್ಲಾ ಅಸೋಸಿಯೇಷನ್ ಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಸ್ವ ಹಿತಾಸಕ್ತಿ, ಲಾಬಿ ತೀವ್ರಗೊಂಡಿದೆ. ಇದರ ವಿರುದ್ಧ ನಾವು ಸಂಘಟಿವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ ಅಜೀವ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಸಹ ಕಾನೂನು ಬಾಹಿರವಾಗಿದೆ. ಮನೋರಂಜನೆ, ಬಾರ್, ಇಸ್ಪೀಟ್ ಮತ್ತಿತರ ಸೌಲಭ್ಯ ಬಳಸುವವರಿಂದ 15 ರಿಂದ 20 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತ ಪಡೆದು ಸದಸ್ಯತ್ವ ನೀಡಲಾಗಿದೆ. ಇಂತಹವರು 2200 ಕ್ಕೂ ಹೆಚ್ಚು ಅಜೀವ ಸದಸ್ಯರಿದ್ದಾರೆ. ಆದರೆ ಇವರೆಲ್ಲರಿಗೂ ಮತದಾನ ಹಕ್ಕು ನೀಡಲು ಬೈಲಾಗೆ ತಿದ್ದುಪಡಿ ತರಲಾಗಿದೆ. ಆದರೆ ಇವರಲ್ಲಿ ಬೆರಳೆಣಿಯಷ್ಟು ಮಾತ್ರ ಬ್ಯಾಡ್ಮಿಂಟನ್ ಕ್ರೀಡಾ ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಇವರಿಗೆ ಬ್ಯಾಡ್ಮಿಂಟನ್ ಅಸೋಷಿಯೇಷನ್ ಗೆ ಮತದಾನ ಮಾಡಲು ನೀಡಿರುವ ಹಕ್ಕನ್ನು ವಾಪಸ್ ಪಡೆದರೆ ಮಾತ್ರ ಜಿಲ್ಲಾ ಘಟಕಗಳ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಜೀವ ಸದಸ್ಯರಿಗೆ ಮತದಾನದ ಹಕ್ಕು ನೀಡಲು 2009 ರಲ್ಲಿ ಬೈಲಾಗೆ ತಿದ್ದುಪಡಿ ತಂದು ಮತದಾನದ ಹಕ್ಕು ನೀಡಲಾಗಿದೆ. ಅಂದಿನಿಂದ ಜಿಲ್ಲಾ ಮಟ್ಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ಸೊರಗುತ್ತಿದೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದೆ. ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಜಿಲ್ಲೆಗಳಿಗೆ ಖಾಸಗಿ ವಲಯ ನೀಡುವ ಪ್ರಾಯೋಜಕತ್ಬದ ಸೌಲಭ್ಯವೂ ದೊರೆಯುತ್ತಿಲ್ಲ ಎಂದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಅಸೋಷಿಯೇಷನ್ ಆಫ್ ಇಂಡಿಯಾಗೆ ಎಲ್ಲಾ ಮಾಹಿತಿ ನೀಡಲಾಗಿದೆ. ಇದರ ಪರಿಣಾಮ ಮೂರು ತಿಂಗಳಲ್ಲಿ ಅಜೀವ ಸದಸ್ಯರಿಗೆ ನೀಡಿರುವ ಮತದಾನದ ಹಕ್ಕು ರದ್ದುಪಡಿಸಿ ಬೈಲಾಗೆ ತಿದ್ದುಪಡಿ ಮಾಡುವಂತೆ 2020 ರ ಜನವರಿಯಲ್ಲಿ ರಾಜ್ಯ ಸಂಸ್ಥೆಗೆ ಬ್ಯಾಡ್ಮಿಂಟನ್ ಅಸೋಷಿಯೇಷನ್ ಆಪ್ ಇಂಡಿಯಾ ಸೂಚಿಸಿದೆ. ಇದಾದ ನಂತರ ಸರಿ ಸುಮಾರು ಎರಡು ವರ್ಷ ಪೂರ್ಣಗೊಳ್ಳುತ್ತಿದ್ದರೂ ಸಹ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇಂದು ನಡೆದ ಸಾಮಾನ್ಯ ಸಭೆಯಲ್ಲಿಯೂ ಸಹ ಈ ಕುರಿತು ಚರ್ಚೆಯಾಗಿಲ್ಲ ಎಂದು ರಘುಪತಿ ಭಟ್ ಆರೋಪಿಸಿದರು.
ಬ್ಯಾಡ್ಮಿಂಟನ್ ಕ್ರೀಡಾಪಟುಗಳು, ಜಿಲ್ಲಾ ಪ್ರತಿನಿಧಿಗಳಾದ ಸೊಯಲ್ ಅಮಿನ್, ಡಾ. ಮೋಹನ್ ಅಪ್ಪಾಜಿ, ರಾಘವೇಂದ್ರ ರಾವ್ ಕೆ. ಜೀವನ್ ಎನ್.ಜಿ. ನಾಗರಾಜ್, ಅನಿಲ್ ಲೋಬೊ, ಗಣೇಶ್, ಶ್ರೀವತ್ಸ ಹಾಜರಿದ್ದರು.