ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಟರಿ ಯೋಜನೆಯನ್ನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ರಾಮಕೃಷ್ಣ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ರಾಮಕೃಷ್ಣ ಅವರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ರವರು ಸ್ವಾತಂತ್ರ್ಯಪೂರ್ವ 1943 – 44ರಲ್ಲಿ ಮೈಸೂರು ಸಂಸ್ಥಾನದ ವತಿಯಿಂದ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ದೇಶ ಭಕ್ತರಿಗೆ ಆತ್ಮಸ್ಥೆರ್ಯ ತುಂಬಲು ಮತ್ತು ದೇಣಿಗೆ ಸಂಗ್ರಹ ಮಾಡಲು ಲಾಟರಿ ಹೆಸರಿನಲ್ಲಿ ದೇಶದಲ್ಲಿ ಪ್ರಥಮವಾಗಿ ಜಾರಿಗೆ ತಂದರು.
ಕರ್ನಾಟಕ ಸರ್ಕಾರ ರಾಜ್ಯದ ನಿರುದ್ಯೋಗಿಗಳು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲೆಂದು ಕರ್ನಾಟಕ ಸರ್ಕಾರ 1969 ರಲ್ಲಿ ಲಾಟರಿ ಯೋಜನೆಯನ್ನು ಜಾರಿಗೆ ತಂದಿದ್ದು , 1972 ರಲ್ಲಿ ಲಾಟರಿ ಮಂತ್ರಿ ಮತ್ತು ಇಲಾಖೆ ಅಸ್ತಿತ್ವಕ್ಕೆ ಬಂದಿರುತ್ತದೆ .
ರಾಜ್ಯದ ಎಲ್ಲಾ ಭಾಗಗಳಲ್ಲಿ ಸುಮಾರು ಹದಿನೇಳು ಲಕ್ಷಕ್ಕೂ ಹೆಚ್ಚು ಜನ ಎಂ.ಎಸ್.ಐ.ಎಲ್ ಲಾಟರಿ ಏಜೆಂಟರುಗಳು ಸುಮಾರು 40 ವರ್ಷಗಳ ಕಾಲ ಸಾವಿರಾರು ಕೋಟಿ ವಹಿವಾಟನ್ನು ಮಾಡಿ ಸರ್ಕಾರಕ್ಕೆ ನೂರಾರು ಕೋಟಿ ರೂ.ಗಳನ್ನು ನಾನಾ ರೀತಿಯಲ್ಲಿ ಪಾವತಿ ಮಾಡಿರುತ್ತಾರೆ . ಲಾಟರಿ ಉದ್ಯಮ ನಿಲುಗಡೆ ಮಾಡಿದ ನಂತರ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ.
2001 – 02ರಲ್ಲಿ ಪ್ರಾರಂಭವಾದ ಆನ್ಲೈನ್ ಲಾಟರಿ, ಒಂದಂಕಿ ಲಾಟರಿ, ಟ್ರೇಡ್ ಲಾಟರಿಗಳು ( ರಾಜ್ಯದ ಲಾಟರಿ ಹೊರತುಪಡಿಸಿ ) ಈ ಲಾಟರಿಗಳು ನಕಲಿ ದಂಧೆಗಳನ್ನು ಮಾಡಿ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದರು . ಈ ಹೊರ ರಾಜ್ಯ ಲಾಟರಿಗಳಿಂದ ಸಾವು – ನೋವು ಸಂಭವಿಸಿದ್ದು, 2007 ರಲ್ಲಿ ರಾಜ್ಯದಲ್ಲಿ ಲಾಟರಿ ನಿಷೇಧವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಎಂ.ಎಸ್.ಐ.ಎಲ್ ನ ಲಾಟರಿ ಏಜೆಂಟರುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿ ಇದುವರೆಗೆ ಭರವಸೆಯನ್ನು ಈಡೇರಿಸಿರುವುದಿಲ್ಲ ಎಂದು ದೂರಿದ ಅವರು, ಕರ್ನಾಟಕ ಸರ್ಕಾರದ ಅಂಗಸಂಸ್ಥೆ ಎಂ.ಎಸ್.ಐ.ಎಲ್ ಡೀಲರ್ ಕೋಡ್ ನಿಂದ ನಿಯೋಜನೆಗೊಳ್ಳುವ ಲಾಟರಿ ಉದ್ಯಮದಿಂದ ಹದಿನೇಳು ಲಕ್ಷದ ಒಂದು ಸಾವಿರದ ಇಪ್ಪತ್ತೈದು ಎಂ.ಎಸ್.ಐ.ಎಲ್ ಲಾಟರಿ ಏಜೆಂಟರುಗಳೂ ನೇಮಕಗೊಂಡಿದ್ದಾರೆ . ಪ್ರತಿ ಏಜೆಂಟರುಗಳಿಗೆ ಹತ್ತು ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ಪಷ್ಟನೆ ನಮ್ಮ ದೇಶದಲ್ಲಿ ಲಾಟರಿ ನಿಷೇಧ ಇಲ್ಲ. ನಮ್ಮ ದೇಶದ ವಿವಿಧ ಒಟ್ಟು ಹದಿಮೂರು ರಾಜ್ಯಗಳಲ್ಲಿ ಲಾಟರಿ ಚಲಾವಣೆಯಲ್ಲಿ ಇರುತ್ತದೆ. ಈ ಎಲ್ಲಾ ರಾಜ್ಯದ ಲಾಟರಿಗಳು ಶೇ .28 ರಷ್ಟು ಜಿ.ಎಸ್.ಟಿ. ತೆರಿಗೆಯ ವ್ಯಾಪ್ತಿಗೆ ಬರುತ್ತದೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತ ರೂಪಾಯಿ ಆದಾಯ ಬರಲಿದೆ.
ಇದೀಗ ಹತ್ತು ದಿನ ನಡೆಯುವ ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ಎಂ.ಎಸ್.ಐ.ಎಲ್ ವತಿಯಿಂದ ನಿಯೋಜನೆಗೊಳ್ಳುವ ಕರ್ನಾಟಕ ರಾಜ್ಯ ಸರ್ಕಾರದ ಲಾಟರಿ ಯೋಜನೆ ಜಾರಿಯಾಗಬೇಕು , ಇಲ್ಲವಾದಪಕ್ಷದಲ್ಲಿ ಸರ್ಕಾರದ ವಿರುದ್ಧ ಮುಂದಿನ ಹೋರಾಟಕ್ಕೆ ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.