ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ಎಕರೆಗೆ ₹10ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಗಳಿಗೆ ನೀರು ನುಗ್ಗಿ ಹಾನಿಯಾದವರಿಗೆ ₹10ಸಾವಿರ ಘೋಷಣೆ ಮಾಡಿದ್ದು ಸ್ವಾಗತ. ಅದೇ ವೇಗದಲ್ಲಿ ಅನ್ನದಾತರ ನೆರವಿಗೂ ನಿಲ್ಲಬೇಕು ಎಂದರು.
ಬಿಜೆಪಿ ಆಡಳಿತದಲ್ಲಿ ಕರ್ನಾಟಕದಲ್ಲಿ ಕೋವಿಡ್ ಸಂದರ್ಭದಲ್ಲಿ ರೈತರಿಗೆ ಯಾರಿಗೂ ಪರಿಹಾರ ಸಿಕ್ಕಿಲ್ಲ. ರೈತರನ್ನು ನಡುನೀರಿನಲ್ಲಿ ಬಿಟ್ಟು ಬಿಡಲಾಗಿದೆ, ಪರಿಹಾರ ಬಾಯಿ ಮಾತಿನಲ್ಲಿ ಮಾತ್ರ ಘೋಷಣೆಯಾಗಿದೆ. ಮೂರು ವರ್ಷದಿಂದ ನಿರಂತರ ನೆರೆ ಉಂಟಾಗುತ್ತಿದ್ದರೂ ಯಾರಿಗೂ ಪರಿಹಾರ ನೀಡಿಲ್ಲ. ಇದರಲ್ಲಿ ಸರಕಾರ ವಿಫಲವಾಗಿದೆ ಎಂದು ಡಿಕೆಶಿ ಆರೋಪಿಸಿದರು.
ಈ ಬಾರಿಯ ಮಳೆಗೂ ರೈತ ಬೆಳೆದ ಎಲ್ಲ ಬೆಳೆಗಳೂ ಕೊಳೆತು ಹೋಗಿವೆ. ಪ್ರಾಕೃತಿಕ ವಿಕೋಪದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳನ್ನು ರೈತರು ಕಳೆದುಕೊಂಡಿದ್ದಾರೆ. ಬಿಜೆಪಿ ಸರಕಾರ ಯಾರ ಜೊತೆಗಿದೆ, ಯಾರ ಪರವಾಗಿದೆ ಎಂಬುದನ್ನು ನೀವೇ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರಕಾರ ಇನ್ಶೂರೆನ್ಸ್ ಕಂಪನಿಗಳ ಜೊತೆಗೆ ಶಾಮೀಲಾಗಿದೆ. ಕಳೆದ ಎರಡು ವರ್ಷದಲ್ಲಿ ಯಾವುದೇ ಇನ್ಶೂರೆನ್ಸ್ ಕಂಪನಿಯವರನ್ನು ಕರೆದು ಮಾತಾಡಿಸಿಲ್ಲ. ರೈತರಲ್ಲಿ ಇನ್ಶೂರೆನ್ಸ್ ಕಂಪನಿಗಳು ಕೋಟ್ಯಂತರ ರೂಪಾಯಿಗಳನ್ನು ಕಟ್ಟಿಸಿಕೊಂಡಿವೆ. ಕಂತು ಕಟ್ಟಿಸಿಕೊಳ್ಳಲು ಇದ್ದ ತರಾತುರಿ ಪರಿಹಾರ ನೀಡಿಸುವಲ್ಲಿ ಯಾಕಿಲ್ಲ? ಎಂದು ಪ್ರಶ್ನಿಸಿದರು.
ಫಸಲ್ ಬಿಮಾ ಯೋಜನೆಯಲ್ಲಿ ಯಾರಿಗೆ ಹಣ ನೀಡಿದ್ದೀರಿ ಎಂದು ಮುಖ್ಯಮಂತ್ರಿಗಳೇ ಹೇಳಿ ಎಂದ ಡಿಕೆ ಶಿವಕುಮಾರ್, ಕೇಂದ್ರದ ಎನ್ಡಿಆರ್ಎಫ್ ಪ್ರಾಕೃತಿಕ ವಿಕೋಪಕ್ಕೆ ನಿಗದಿಪಡಿಸಿದ ಪರಿಹಾರ ಯಾವುದಕ್ಕೂ ಪ್ರಯೋಜನವಿಲ್ಲ. ಕೇಂದ್ರ ಸರಕಾರ ಕೊಡುತ್ತದೋ ಬಿಡುತ್ತದೋ ಬೇರೆ ಮಾತು, ಆದರೆ ನಮ್ಮ ರಾಜ್ಯ ಸರಕಾರದಿಂದ ಕೂಡಲೇ ಪರಿಹಾರ ಘೋಷಣೆ ಮಾಡಬೇಕು, ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಆಗುತ್ತಿರುವ ನಷ್ಟಕ್ಕೆ ಸರಕಾರದ ಮೌನ ವಹಿಸಿರುವುದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳಿಗೆ ರೈತರ ಬಗೆಗೆ ಇರುವ ತಾತ್ಸಾರ ಭಾವಕ್ಕೆ ಇದು ಉದಾಹರಣೆ. ಎರಡೂ ಸರಕಾರಗಳಿಂದ ಕರ್ನಾಟಕ ಮತ್ತು ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಟೀಕಿಸಿದರು.