ಬೆಂಗಳೂರು : ಊಟ ಮಾಡುವ ವಿಚಾರಕ್ಕಾಗಿ ತಗಾದೆ ತೆಗೆದು ಕುಡಿದ ಅಮಲಿನಲ್ಲಿ ಮಾಜಿ ಸಂಸದ ಪುತ್ರನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್ ಕುನ್ನೂರ್ ಪುತ್ರ, ಉದ್ಯಮಿ ಚಂದ್ರಶೇಖರ್ ಕುನ್ನೂರ್ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಚೇತನ್ ಹೆಗಡೆ ಹಾಗು ಪ್ರಶಾಂತ್ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿದ ಸೂಜಿ ಕ್ಯೂ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಜನವರಿ 23 ರಂದು ರಾತ್ರಿ ಮಾಜಿ ಸಂಸದರ ಪುತ್ರ ಚಂದ್ರಶೇಖರ್ ಹಾಗು ಆತನ ಸ್ನೇಹಿತರೊಡನೆ ಊಟಕ್ಕಾಗಿ ಮಿರಾಜ್ ಹೋಟೆಲ್ಗೆ ಹೋಗಿದ್ದರು. ಊಟ ಆರ್ಡರ್ ಮಾಡುವಾಗ ಹೋಟೆಲ್ ಪಕ್ಕದ ಟೇಬಲ್ನಲ್ಲಿ ಕುಳಿತಿದ್ದ ಆರೋಪಿ ಚೇತನ್ ಹೆಗಡೆ ಈ ಹೋಟೆಲ್ನಲ್ಲಿ ಊಟ ಮಾಡಬೇಡಿ, ನಮ್ಮ ರೆಸ್ಟೋರೆಂಟ್ಗೆ ಬನ್ನಿ ಎಂದು ಬಲವಂತವಾಗಿ ಕರೆದುಕೊಂಡು ಇಂಡಿಯನ್ ಎಕ್ಸ್ಪ್ರೆಸ್ ಬಳಿಯಿರುವ ಸೂಜಿ ಕ್ಯೂ ಬಾರ್ ಅಂಡ್ ರೆಸ್ಟೋರೆಂಟ್ಗೆ ಕರೆದೊಯ್ದಿದ್ದಾನೆ.
ಅಲ್ಲಿಗೆ ಹೋಗಿದ್ದ ಚಂದ್ರಶೇಖರ್ ಊಟ ಆರ್ಡರ್ ಮಾಡಿದ್ದಾರೆ. ಊಟ ತಡವಾಗಿದ್ದಕ್ಕೆ ವಿಚಾರಿಸಿದಾಗ ಚೇತನ್ ಹೆಗಡೆ ಜೊತೆಗಿದ್ದ ಸ್ನೇಹಿತ ಪ್ರಶಾಂತ್ ರೆಡ್ಡಿ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದಕ್ಕೆ ಪ್ರತಿರೋಧಿಸಿದ ಚಂದ್ರಶೇಖರ್ಗೆ ಕಪಾಳಮೋಕ್ಷ ಮಾಡಿ ಬಾಟಲಿಯಿಂದ ಚುಚ್ಚುವುದಕ್ಕೆ ಮುಂದಾಗಿದ್ದಾನೆ. ಆಗ ಸ್ಥಳದಿಂದ ತಪ್ಪಿಸಿಕೊಳ್ಳಲು ಮುಂದಾದರೂ ಆರೋಪಿಗಳು ತಪ್ಪಿಸಿಕೊಳ್ಳದಂತೆ ಬೆದರಿಸಿ ಹೋಟೆಲ್ನಲ್ಲಿ ಕೂರಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.
ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೊರಬಂದು ವಿಧಾನಸೌಧ ಪೊಲೀಸರಿಗೆ ದೂರು ನೀಡಿದ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೈಟ್ ಕರ್ಫ್ಯೂ ಉಲ್ಲಂಘಿಸಿದ್ದರಿಂದ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಎನ್ಡಿಎಂಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.