ಬೆಂಗಳೂರು, ಡಿ.16 : ಮನೆಗೆ ನುಗ್ಗಿ ಗೃಹಿಣಿ ನಕಲಿ ಪಿಸ್ತೂಲಿನಿಂದ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ಕ್ಯಾಬ್ ಚಾಲಕನನ್ನು 16 ಗಂಟೆಯೊಳಗೆ ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ಬೆಲೆಯ ಮಾಂಗಲ್ಯಸರ, ಕಾರು ಹಾಗೂ ಪಿಸ್ತೂಲು ವಶಪಡಿಸಿಕೊಂಡಿದ್ದಾರೆ.ಮೂಲತಃ ವಿಜಯಪುರದ ಲಿಂಗಪ್ಪ (32) ಬಂಧಿತ ಆರೋಪಿ. ಈತ ನಗರದ ಸಿಂಗಾಪುರ ಲೇಔಟ್ನಲ್ಲಿ ವಾಸವಾಗಿದ್ದು, ಕ್ಯಾಬ್ ಚಾಲಕ ವೃತ್ತಿ ಮಾಡುತ್ತಿದ್ದಾನೆ.
ನಿನ್ನೆ ನಂದಿನಿ ಎಂಬ ಗೃಹಿಣಿ ತಮ್ಮ ಮೂರು ವರ್ಷದ ಮಗುವಿನ ಜತೆ ಮನೆಯಲ್ಲಿದ್ದರು. ಆ ಸಂದರ್ಭದಲ್ಲಿ ಮಧ್ಯಾಹ್ನ 2.30ರ ಸುಮಾರಿನಲ್ಲಿ ಆರೋಪಿ ಇವರ ಮನೆಗೆ ನುಗ್ಗಿ ನಕಲಿ ಪಿಸ್ತೂಲು ತೋರಿಸಿ ಚೀರಾಡದಂತೆ ಬೆದರಿಸಿದ್ದಾನೆ. ನಂತರ ನಂದಿನಿ ಅವರ ಮಾಂಗಲ್ಯಸರ ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದನು. ತಕ್ಷಣ ನಂದಿನಿ ಅವರು ಗಂಗಮ್ಮನಗುಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಸಿದ್ದೇಗೌಡ ಮತ್ತು ಸಿಬ್ಬಂದಿ ಘಟನಾ ಸ್ಥಳದ ಅಕ್ಕಪಕ್ಕದಲ್ಲಿನ ಸಿಸಿಟಿವಿ ಆಧರಿಸಿ ಕಾರಿನ ನಂಬರ್ ಪತ್ತೆಹಚ್ಚಿದ್ದಾರೆ. ನಂತರ ಆರೋಪಿಯ ಜಾಡು ಹಿಡಿದು ಘಟನೆ ನಡೆದ 16 ಗಂಟೆಯೊಳಗೆ ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ 5 ಲಕ್ಷ ರೂ. ಬೆಲೆಯ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ್ದ ಕಾರು, ನಕಲಿ ಪಿಸ್ತೂಲು ವಶಪಡಿಸಿಕೊಂಡಿದ್ದಾರೆ.ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಮೋಜು ಮಸ್ತಿಗಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ದರೋಡೆಗೆ ಪ್ಲಾನ್ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಯಶವಂತಪುರ ಉಪವಿಭಾಗದ ಎಸಿಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸಿದ್ದೇಗೌಡ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.